ತಿ.ನರಸೀಪುರ: ಎಪಿಎಂಸಿ, ಭೂ ಸುಧಾರಣಾ, ಕಾರ್ಮಿಕ ತಿದ್ದುಪಡಿ ಕಾಯ್ದೆಗಳ ಜಾರಿ ಹಾಗೂ ವಿದ್ಯುತ್ ಖಾಸಗೀಕರಣ ಖಂಡಿಸಿ ವಿವಿಧ ಸಂಘಟನೆಗಳು ಕರೆದಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ರೈತ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು, ರೈತರು, ಕಾರ್ಮಿಕರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಸೇರಿ ಜಮಾಯಿಸಿ ಮಾನವ ಸರಪಳಿ ರಚಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಭಟನಕಾರರು ಮೆರವಣಿಗೆ ತೆರಳಲು ಮುಂದಾದ ವೇಳೆ ಪೊಲೀಸರು ತಡೆದು ಮೆರವಣಿಗೆಗೆ ಅನುಮತಿ ಇಲ್ಲ ಮನವಿ ಮಾಡಿದ ವೇಳೆ ಪೊಲೀಸರ ಸೂಚಿಸಿದಾಗಮಾತಿನ ಚಕಮಕಿ ನಡೆಯಿತು. ಮುಖಂಡರು ಮೆರವಣಿಗೆ ಮಾಡಲು ಮುಂದಾದಾಗ ರೈತ ಮುಖಂಡರಾದ ಕುರುಬೂರು ಸಿದ್ದೇಶ್, ಕಿರಗಸೂರು ಶಂಕರ್, ಪ್ರಸಾದ್ ನಾಯಕ್ ದಲಿತ ಮುಖಂಡರಾದ ಆಲಗೂಡು ಶಿವಕುಮಾರ್, ಉಮಾ ಮಹದೇವ್, ರಾಜು ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಠಾಣೆಗೆ ಕರೆದೊಯ್ದರು. ನಂತರ ಬಿಡುಗಡೆ ಮಾಡಿದರು.
ತಳ್ಳಾಟ ರೈತ ಅಸ್ವಸ್ಥ: ಪ್ರತಿಭಟನೆ ನಡೆಸಿದಾಗ ಪೊಲೀಸರು ತಡೆದಾಗ ತಳ್ಳಾಟಕ್ಕೆ ರೈತ ಕೆ.ಜಿ. ಗುರುಸ್ವಾಮಿ ಅವರು ಅಸ್ವಸ್ಥರಾದರು. ತಕ್ಷಣ ಅವರನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಿ, ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಯಿತು.
‘ಸರ್ಕಾರ ತಿದ್ದುಪಡಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ರೈತರಿಗೆ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಹೋರಾಟಗಾರರನ್ನು ಬಂಧಿಸುವ ಮೂಲಕ ಭಯ ಸೃಷ್ಟಿ ಮಾಡಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈ ಕಾಯ್ದೆಗಳನ್ನು ಹಿಂಪಡೆಯುವವರೆವಿಗೂ ಹೋರಾಟ ಮಾಡುತ್ತೇವೆ’ ಎಂದು ಪ್ರತಿಭಟನಕಾರರು ಸರ್ಕಾರದ ವಿರುದ್ಧ ಕಿಡಿಕಾರಿದರು.
ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಮೆಡಿಕಲ್, ಬ್ಯಾಂಕ್ಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿತ್ತು. ಸಾರಿಗೆ ಬಸ್ ಸಂಚಾರ ವಿರಳವಾಗಿದ್ದರೆ, ಆಟೊ, ಕಾರು, ಹಾಗೂ ಖಾಸಗಿ ಬಸ್ಗಳ ಸಂಚಾರ ಸ್ಥಗಿತಗೊಂಡಿತ್ತು.
ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಕೆ.ಕುಮಾರಸ್ವಾಮಿ, ಅತ್ತಹಳ್ಳಿ ಶಿವನಂಜು, ಈ.ರಾಜು, ಗೌರಿ ಶಂಕರ್ , ಬನ್ನಳ್ಳಿ ಸೋಮಣ್ಣ, ಸೋಸಲೆ ಶಶಿಕಾಂತ್, ಕುಕ್ಕೂರು ರಾಜು, ನಿಂಗರಾಜು ಅಪ್ಪಣ್ಣ, ಯಡದೊರೆ ಸಿದ್ದರಾಜು, ಶಿವಪ್ಪ, ಮರಿದೇವೇಗೌಡ, ಮಹದೇವ ಸ್ವಾಮಿ, ಬನ್ನೂರು ಹುಚ್ಚೇಗೌಡ, ವಿವಿಧ ಸಂಘಟನೆಗಳ ಪ್ರಮುಖರಾದ ನಾಗೇಂದ್ರ, ಎಂ.ಮಾದೇಶ್, ಸಿದ್ದಲಿಂಗಸ್ವಾಮಿ, ಬಸವರಾಜು, ರೇವಣ್ಣ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.