
ಮೈಸೂರು: ‘ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ್ದ ಭಾಷಣದ ಬದಲು, ತಮ್ಮದೇ ಕೆಲವು ಸಾಲುಗಳನ್ನು ಓದಿ ರಾಜ್ಯಪಾಲರು ಸದನದಿಂದ ಹೊರನಡೆದಿರುವುದು ವಿಷಾದದ ಸಂಗತಿ’ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ರಾಜ್ಯಪಾಲರ ಹುದ್ದೆಯು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ಮೊದಲ ಕರ್ತವ್ಯವನ್ನು ಹೊಂದಿದೆ. ಅವರು ರಾಜಕೀಯವಾಗಿ ತಟಸ್ಥ ನಿಲುವು ಹೊಂದಿರಬೇಕು. ಆದರೆ, ಥಾವರಚಂದ್ ಗೆಹಲೋತ್ ಅವರು ಒಂದು ರಾಜಕೀಯ ಪಕ್ಷದ ಮುಖವಾಣಿಯಂತೆ ನಡೆದುಕೊಳ್ಳುತ್ತಿರುವುದು ಬಹಿರಂಗವಾಗಿದೆ’ ಎಂದು ಆರೋಪಿಸಿದ್ದಾರೆ.
‘ಸರ್ಕಾರದ ನಿಲುವುಗಳನ್ನು ಪ್ರತಿಬಿಂಬಿಸುವ ಭಾಷಣವನ್ನು ಪೂರ್ಣಪ್ರಮಾಣದಲ್ಲಿ ಅವರು ಓದಲೇಬೇಕಿತ್ತು. ಇದು ಅವರ ಕರ್ತವ್ಯವೂ ಹೌದು. ಆದರೆ, ನಿರಾಕರಿಸುವ ಮೂಲಕ ರಾಜ್ಯದ ಜನರನ್ನು ಅವಮಾನಿಸಿದ್ದಾರೆ. ಇಂತಹ ನಡವಳಿಕೆ ಸಮರ್ಪಕವಲ್ಲ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾದವರೇ ರೂಪಿತ ನಿಯಮಗಳನ್ನು ಉಲ್ಲಂಘಿಸುವುದು ಹುದ್ದೆಗೆ ಶೋಭೆ ತರುವಂಥದ್ದಲ್ಲ’ ಎಂದಿದ್ದಾರೆ.
‘ರಾಜ್ಯಪಾಲರ ಕಚೇರಿ ರಾಜಕೀಯ ಕಾರಣಗಳಿಗಾಗಿ ಇಷ್ಟೊಂದು ಪ್ರಬಲವಾಗಿ ಈ ಹಿಂದೆ ಬಳಕೆಯಾದ ಉದಾಹರಣೆಯೇ ಇಲ್ಲ. ಈಗಿನ ರಾಜ್ಯಪಾಲರ ನಡವಳಿಕೆ ರಾಜ್ಯದಲ್ಲಿ ಕಪ್ಪು ಅಧ್ಯಾಯವಾಗಿ ದಾಖಲಾಗಲಿದೆ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.