ADVERTISEMENT

ಬೃಹತ್‌ ಮೈಸೂರು ಮಹಾನಗರ ಪಾಲಿಕೆ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಮೈಸೆಮ್ ಕಾಲೇಜಿನಲ್ಲಿ ಸಭೆ ನಡೆಸಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 20:08 IST
Last Updated 24 ಜನವರಿ 2026, 20:08 IST
ಮೈಸೂರು ತಾಲ್ಲೂಕಿನ ಮೈಸೆಮ್ ಕಾಲೇಜಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಿವಕುಮಾರ್ ಮಾತನಾಡಿದರು
ಮೈಸೂರು ತಾಲ್ಲೂಕಿನ ಮೈಸೆಮ್ ಕಾಲೇಜಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಿವಕುಮಾರ್ ಮಾತನಾಡಿದರು   

ಮೈಸೂರು: ಬೃಹತ್‌ ಮೈಸೂರು ಮಹಾನಗರಪಾಲಿಕೆ (ಬಿಎಂಸಿಸಿ) ರಚನೆಗೆ ಮುಂದಾಗಿರುವ ಸರ್ಕಾರವು, ನಗರಕ್ಕೆ ಸಮೀಪದಲ್ಲಿರುವ ವರುಣ ಹೋಬಳಿಯ ಪ್ರದೇಶಗಳನ್ನು ಕೈಬಿಟ್ಟಿರುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು.

ತಾಲ್ಲೂಕಿನ ಚಿಕ್ಕಹಳ್ಳಿ ದೊಡ್ಡ ಆಲದ ಮರದ ಬಳಿಯ ಮೈಸೆಮ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.

‘ವರುಣ ಹೋಬಳಿ ಪ್ರದೇಶಗಳನ್ನು ಬಿಎಂಸಿಸಿಗೆ ಸೇರಿಸಬೇಕು’ ಎಂದು ಆಗ್ರಹಿಸಲಾಯಿತು. ಇದಕ್ಕಾಗಿ ಹೋರಾಡಲು ‘ಬೃಹತ್ ಮೈಸೂರು ಮಹಾನಗರ ಪಾಲಿಕೆ ಹೋರಾಟ ಸಮಿತಿ’ ರಚಿಸಲು ನಿರ್ಧರಿಸಲಾಯಿತು. ಅಧಿಸೂಚನೆಗೆ ಆಕ್ಷೇಪಣೆಯನ್ನು ಫೆ.2ರೊಳಗೆ ಸಲ್ಲಿಸಲು ಹಾಗೂ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರಿಗೆ ಮನವಿ ನೀಡಲು ನಿರ್ಧರಿಸಲಾಯಿತು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ವರುಣ ಕ್ಷೇತ್ರದ ಬಿಜೆಪಿ ಮುಖಂಡ ಶರತ್ ಪುಟ್ಟಬುದ್ದಿ, ‘ಬಿಎಂಸಿಸಿ ರಚನೆಯಲ್ಲಿ ವರುಣ ಹೋಬಳಿಯ ಪ್ರದೇಶಗಳನ್ನು ಕೈ ಬಿಟ್ಟಿರುವುದು ಅವೈಜ್ಞಾನಿಕ ನಿರ್ಧಾರವಾಗಿದೆ. ಸರ್ಕಾರವು ಕೂಡಲೇ ಸರಿಪಡಿಸಿ ಸೇರ್ಪಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಮೈಸೂರಿನ ಪಶ್ಚಿಮ ದಿಕ್ಕಿನಲ್ಲಿ ಸರಾಸರಿ 20–25 ಕಿ.ಮೀ. ದೂರವಿರುವ ಇಲವಾಲ, ನಾಗವಾಲ, ಬೀರಿಹುಂಡಿ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸಲಾಗಿದೆ. ಆದರೆ, ಪೂರ್ವ ದಿಕ್ಕಿನಲ್ಲಿ, ಅದರಲ್ಲೂ ಮುಖ್ಯಮಂತ್ರಿಯವರ ಸ್ವಕ್ಷೇತ್ರ ವರುಣ ವ್ಯಾಪ್ತಿಯ ಮೊಸನಬಾಯನಹಳ್ಳಿ, ವರುಣ, ವಾಜಮಂಗಲ, ದೇವಲಾಪುರ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳು ಮತ್ತು ಮುಡಾ ಮತ್ತು ಖಾಸಗಿಯವರು ಅಭಿವೃದ್ಧಿಪಡಿಸಿರುವ ಬಡಾವಣೆಗಳು ಮೈಸೂರಿಗೆ ಕೇವಲ 2ರಿಂದ 3 ಕಿ.ಮೀ. ಹತ್ತಿರದಲ್ಲಿದ್ದರೂ ಸೇರಿಸಿಲ್ಲ. ಇದು ಸರಿಯಲ್ಲ’ ಎಂದರು.

‘ಮಾನದಂಡದ ಪ್ರಕಾರ ಅರ್ಹತೆ ಇದ್ದರೂ ಈ ಪ್ರದೇಶಗಳನ್ನು ಸೇರಿಸದಿರಲು ಕಾರಣಗಳೇನು? ಇದೊಂದು ಅವೈಜ್ಞಾನಿಕ ನಿರ್ಧಾರವಲ್ಲವೇ? ಎಂದು ಕೇಳಿದರು.

ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕೆ.ಎನ್. ಪುಟ್ಟಬುದ್ದಿ, ಮೈಸೆಮ್‌ ಎಂಜಿನಿಯರಿಂಗ್‌ ಕಾಲೇಜು ಅಧ್ಯಕ್ಷ ಶಿವಪ್ಪ, ಟ್ರಸ್ಟಿ ಕಿಶೋರ್ ಬಿದ್ದಪ್ಪ, ಮಾಜಿ ಮೇಯರ್‌ಗಳಾದ ದಕ್ಷಿಣಾಮೂರ್ತಿ, ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸಿಇಒ ಶಿವಕುಮಾರ್, ಚಿಕ್ಕಹಳ್ಳಿ ಕೃಷ್ಣಮೂರ್ತಿ, ಮಾದಪ್ಪ, ಪ್ರವೀಣ್, ಸಿದ್ಧಾರ್ಥ, ಶಿವಸ್ವಾಮಿ, ಲೋಹಿತ್, ವಾಸುದೇವನ್, ಜಯರಾಂ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.