
ರಂಗಕರ್ಮಿ ಪ್ರಸನ್ನ
ಮೈಸೂರು: ‘ನಾವು ಖಾದಿಗೆ ಮಾರುಕಟ್ಟೆ ಒದಗಿಸಿ, ಅದರಲ್ಲಿ ಬರುವ ಲಾಭವನ್ನು ಉತ್ಪಾದಕರಿಗೆ ತಲುಪಿಸಿದಾಗ ಗ್ರಾಮ ಗೆಲ್ಲುತ್ತದೆ’ ಎಂದು ರಂಗಕರ್ಮಿ ಪ್ರಸನ್ನ ಪ್ರತಿಪಾದಿಸಿದರು.
ಇಲ್ಲಿನ ಜೆಎಲ್ಬಿ ರಸ್ತೆಯ ಹಾರ್ಡಿಕ್ ಶಾಲೆ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಬದನವಾಳು ಸತ್ಯಾಗ್ರಹ ಸಮಿತಿಯು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ನಕಲಿ ಸಿಂಥೆಟಿಕ್ ಬಟ್ಟೆಗಳು ಕೈ ಮಗ್ಗದ ಉದ್ಯಮ ನಂಬಿರುವ ಮಹಿಳೆಯರ ಕೈಗಳನ್ನು ತುಂಡರಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಈ ಹಿಂದೆ ಸಹಜವಾದುದು ಯಾವುದು ಎಂಬುದನ್ನು ಅರಿಯುವ ವ್ಯವಸ್ಥೆ ಇರಲಿಲ್ಲ. ಈಗ ಅದಕ್ಕೆ ಬೇಕಾದ ತಂತ್ರಜ್ಞಾನವಿದೆ. ಪರಿಶುದ್ಧ ಬಟ್ಟೆಗೆ ಉತ್ತಮ ಬೇಡಿಕೆಯೂ ಇದೆ’ ಎಂದರು.
ಲೇಖಕ ಜಿ.ಪಿ. ಬಸವರಾಜು ಮಾತನಾಡಿ, ‘ರಾಷ್ಟ್ರದ ಗಮನಸೆಳೆಯಲು ಬದನವಾಳಿನಲ್ಲಿ ದೊಡ್ಡ ಸಮಾವೇಶ ಮಾಡಬೇಕು. ಸರ್ಕಾರದ ಜವಾಬ್ದಾರಿಯುಳ್ಳವರನ್ನು ಕರೆಸಿ, ಅನುದಾನವನ್ನು ಕಟ್ಟಡಕ್ಕೆ ಸೀಮಿತ ಮಾಡದೆ ನಮ್ಮ ಆಶಯವನ್ನೂ ಅಳವಡಿಸುವಂತೆ ಒತ್ತಾಯ ಮಾಡಬೇಕು’ ಎಂದು ಸಲಹೆ ನೀಡಿದರು.
ಪತ್ರಕರ್ತೆ ರಶ್ಮಿ ಕೋಟಿ ಮಾತನಾಡಿ, ‘ಖಾದಿ ಉತ್ಪಾದನೆಗೆ ಬೇಡಿಕೆ ಇದೆ. ಆದರೆ, ಮಾರಾಟ ಆಗುತ್ತಿಲ್ಲ. ಅವುಗಳ ನಡುವಿನ ಅಂತರವನ್ನು ನಾವು ಕಡಿಮೆ ಮಾಡಬೇಕಿದೆ. ಕೈಮಗ್ಗದ ಖಾದಿ ಜನರಿಗೆ ತಲುಪಿಸಬೇಕಿದೆ. ಅಲ್ಲಿ ಸದ್ಯ 48 ಜನ ಕೆಲಸ ಮಾಡುತ್ತಿದ್ದಾರೆ. ಅವರನ್ನು ಗೌರವದಿಂದ ಕಾಣುವ ಕೆಲಸವಾಗಬೇಕು. ಇಲ್ಲದಿದ್ದರೆ ಅವರ ಕೌಶಲ ಸತ್ತು ಹೋಗುತ್ತದೆ. ಮಹಿಳೆಯರ ಗೌರವಯುತ ಬದುಕಿನ ಹಾದಿ ತಪ್ಪಿ ಹೋಗುತ್ತದೆ’ ಎಂದು ಹೇಳಿದರು.
ಉಮಾಶಂಕರ ಮಾತನಾಡಿ, ‘ಸರ್ಕಾರಿ ಅಧಿಕಾರಿಗಳು ಖಾದಿ ಧರಿಸುವಂತೆ ಆದೇಶವಾಗಿದೆ. ಆದರೆ ವಿಧಾನಸೌಧದ ಕೆಳಗೆ ಮಾರಾಟವಾಗುವ ಖಾದಿಯೇ ನಕಲಿಯಾಗಿದೆ. ಕೈಮಗ್ಗದ ಮಹಿಳೆಯರಿಗೆ ತಲುಪಬೇಕಾದ ಹಣ ಕಾಳಸಂತೆಕೋರರಿಗೆ ಹೋಗುತ್ತಿದೆ. ಪಾದಯಾತ್ರೆ ಮಾಡಿ ಗ್ರಾಮಸ್ಥರೊಂದಿಗೆ ಚರ್ಚಿಸಬೇಕು. ಕೈಯಿಂದ ಹೆಣೆದ ಖಾದಿ ಧರಿಸಲು ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಗಾಂಧಿವಾದಿ ಜಿ.ಎಸ್. ಜಯದೇವ್, ತುಮಕೂರಿನ ಯತಿರಾಜ್, ಚಾಮರಾಜನಗರದ ವೆಂಕಟರಾಜು, ಪುಣಜೂರು ದೊರೆಸ್ವಾಮಿ, ಎ.ಡಿ. ಸಿಲ್ವಾ, ತಗಡೂರು ಮೋಹನ್, ಬದನವಾಳು ಮಹದೇವಪ್ಪ, ಉಮಾಶಂಕರ್, ಜಯರಾಮ್ ಬೆಂಗಳೂರಿನ ಪವಿತ್ರಾ ಮುದ್ದಯ್ಯ, ಗ್ರಾಮ ಸೇವಾ ಸಂಘದ ಲಾವಣ್ಯ, ಅಭಿಲಾಷ್, ಕರುಣಾಕರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.