ಹುಣಸೂರು: ನಗರದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು.
ಉಕ್ಕಿನಕಂತೆ ಮಠದ ಸಾಂಬಸದಾಶಿವಸ್ವಾಮೀಜಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ರಂಗನಾಥಸ್ವಾಮಿ ಬಡಾವಣೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಯುವಕರು ಹಾಗೂ ಮಹಿಳೆಯರು ಕುಣಿದು ಕುಪ್ಪಳಿಸಿ, ಸುಮಾರು 3 ಕಿ.ಮೀವರೆಗೆ ಹೆಜ್ಜೆ ಹಾಕಿದ್ದು ವಿಶೇಷ ಎನಿಸಿತ್ತು. ಡಿಸೆಂಬರ್ ತಿಂಗಳಲ್ಲಿ ಆಚರಿಸಬೇಕಿದ್ದ ಹನುಮ ಜಯಂತಿ ವಿವಿಧ ಕಾರಣಗಳಿಂದ ಮುಂದೂಡಲಾಗಿತ್ತು.
ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಹುಣಸೂರು ನಗರದಲ್ಲಿ ವಿವಿಧ ಕಾರಣಗಳಿಂದಾಗಿ ಜಯಂತಿ ಆಚರಣೆ ಮುಂದೂಡಲಾಗಿತ್ತು. ರಸ್ತೆಗಳ ಮೇಲಿನ ನಿರ್ಬಂಧ ತೆರವು ಸಂಬಂಧ ಈಗಾಗಲೇ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಫೆ. 29ರ ನಂತರದಲ್ಲಿ ಅಧಿಕೃತವಾಗಿ ಆದೇಶ ಹೊರ ಬೀಳಲಿದೆ. ಆದರೆ, ರಾಜಕೀಯ ಪ್ರೇರಿತ ಮೆರವಣಿಗೆಗಳಿಗೆ ಇಲ್ಲಿ ಅವಕಾಶ ಇರುವುದಿಲ್ಲ’ ಎಂದರು.
ಹನುಮ ಜಯಂತಿ ಒಳಗಾಗಿ ರಸ್ತೆ ನಿರ್ಬಂಧ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದೆ. ಆದರೆ, ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡುವಲ್ಲಿ ತಡವಾಯಿತು. ನಿಷೇಧ ತೆರವುಗೊಳಿಸಲು ಗೃಹ ಸಚಿವಾಲಯ ವಿಳಂಬ ಮಾಡಿದೆ. ಯುವಕರು ನಿರಾಸೆ ಆಗುವ ಅಗತ್ಯವಿಲ್ಲ. ಮುಂದಿನ ಎರಡು– ಮೂರು ದಿನಗಳಲ್ಲಿ ಅಧಿಕೃತ ಆದೇಶ ಹೊರ ಬಂದ ಬಳಿಕ ನಿಷೇಧಿತ ರಸ್ತೆಯಲ್ಲೇ ರಾಷ್ಟ್ರೀಯ ಹಬ್ಬ ಆಚರಿಸಲು ಬದ್ಧ ಎಂದರು.
ಅಡಗೂರು ಎಚ್.ವಿಶ್ವನಾಥ್, ಶಾಸಕ ಎಚ್.ಪಿ.ಮಂಜುನಾಥ್, ಮುಖಂಡರಾದ ಸಿ.ಎಚ್.ವಿಜಯಶಂಕರ್, ಜೆಡಿಎಸ್ ಮುಖಂಡ ದೇವರಹಳ್ಳಿ ಸೋಮಶೇಖರ್, ಕಾಂಗ್ರೆಸ್ನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಟಾ ಅಮರನಾಥ್, ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ರಿಷ್ಯಂತ್, ಯೋಗಾನಂದಕುಮಾರ್, ವಿ.ಎನ್.ದಾಸ್, ಸ್ವಾಮಿಗೌಡ, ತಹಶೀಲ್ದಾರ್ ಬಸವರಾಜ್, ಡಿವೈಎಸ್ಪಿ ಸುಂದರ್ ರಾಜ್ ಕಾರ್ಯಕ್ರಮದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.