
ಸಾಲಿಗ್ರಾಮ: ‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಗ್ರಾಮ ಪಂಚಾಯಿತಿ ಅಧಿಕಾರ ಮತ್ತು ವಿಕೇಂದ್ರಿಕರಣಕ್ಕೆ ಹೆಚ್ಚು ಒತ್ತು ನೀಡಿತ್ತು, ಇಂತಹ ಯೋಜನೆಯ ಹೆಸರನ್ನು ಕೇಂದ್ರದ ಬಿಜೆಪಿ ಸರ್ಕಾರ ತೆಗೆದು ಹಾಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಆರೋಪ ಮಾಡಿದರು.
ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಸೋಮವಾರ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
‘ದೇಶದ ಯಾವುದೇ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಿಜೆಪಿ ಸರ್ಕಾರ ಯೋಜನೆ ಹೆಸರು ಬದಲಾವಣೆ ಮಾಡಿದೆ. ಜನರು ಜಾಗೃತರಾಗುವ ಮೂಲಕ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳುವವರಿಗೆ ತಕ್ಕ ಶಾಸ್ತಿ ಮಾಡಬೇಕು’ ಎಂದು ಸಚಿವರು ಮನವಿ ಮಾಡಿದರು.
‘ಸಂವಿಧಾನ ರಕ್ಷಿಸಿದರೆ ದೇಶದ ಅಖಂಡತೆಯ ರಕ್ಷಣೆ ಮಾಡಿದಂತೆ ಆಗುತ್ತದೆ, ಪ್ರಸ್ತುತ 140 ಕೋಟಿ ಜನರಿಗೆ ಸಂವಿಧಾನ ಹಕ್ಕುಗಳನ್ನು ನೀಡಿದೆ. ಅಂಬೇಡ್ಕರ್ ಅವಮಾನ, ನೋವು, ಶೋಷಣೆಗಳನ್ನು ಉಂಡು ತನ್ನ ಸಮುದಾಯ ಅಲ್ಲದೆ ದೇಶದ ಜನರು ನೋವು ಅನುಭವಿಸಬಾರದು ಎಂದು ಸಂವಿಧಾನವನ್ನು ರಚಿಸಿದರು. ಇಂದು ನಾವು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ’ ಎಂದು ಹೇಳಿದರು.
‘ದೇಶದ ಸಂವಿಧಾನನದ ಮೂಲಕ ಸಂಪತ್ತಿನ ಹಂಚಿಕೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಪೂರಕವಾಗಿವೆ’ ಎಂದು ಹೇಳಿದರು.
‘ಪ್ರಸ್ತುತ ದೇಶದಲ್ಲಿ ಬಹುತ್ವ ರಕ್ಷಣೆ ಆಗಬೇಕು, ಅಲ್ಲದೆ ಯೋಗ್ಯರ ಕೈಯಲ್ಲಿ ಅಧಿಕಾರ ಇರಬೇಕು ಆಗ ಮಾತ್ರ ಬಡತನ ನಿರ್ಮೂಲನೆ ಮಾಡಲ ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್, ದಲಿತ ಮುಖಂಡ ಅಚ್ಚುತಾನಂದ, ತಹಶೀಲ್ದಾರ್ ರುಕಿಯಾಬೇಗಂ, ಇಒ ರವಿಕುಮಾರ್, ಲಕ್ಷ್ಮೀಪುರ ಗ್ರಾ.ಪಂ. ಅಧ್ಯಕ್ಷೆ ಭವಾನಿ, ಮುಖಂಡ ಸಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಹುಚ್ಚೇಗೌಡ, ಕೃಷ್ಣ, ವಕೀಲ ಮೂರ್ತಿ, ಸಾಲಿಗ್ರಾಮ ಚಂದು, ಟೌನ್ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಭೂ ನ್ಯಾಯ ಮಂಡಳಿ ಸದಸ್ಯ ರಜನೀಕಾಂತ್, ಕಂಠಿಕುಮಾರ್, ಕುಳ್ಳಯ್ಯ, ರಾಜಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.