
ಎಚ್.ಡಿ.ಕೋಟೆ: ಸರಗೂರು ತಾಲ್ಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೂರು ಗ್ರಾಮದ ಹಾಲುಗಡ ಹತ್ತಿರ ಬಾರ್ ತೆರೆಯಲು ಅನುಮತಿ ನೀಡಬಾರದು ಮತ್ತು ಬೇರೆ ಸ್ಥಳದಿಂದ ಸ್ಥಳಾಂತರ ಮಾಡಬಾರದೆಂದು ಒತ್ತಾಯಿಸಿ ಇಟ್ನಾ, ಕುನ್ನಪಟ್ಟಣ, ಚಾಮೇಗೌಡನಹುಂಡಿ, ಶಾಂತಿಪುರ, ಪುರದಕಟ್ಟೆ, ಕೊತ್ತೇಗಾಲ ಗ್ರಾಮಸ್ಥರು, ದಲಿತ ಸಂಘರ್ಷ ಸಮಿತಿ ಮತ್ತು ಕರವೇ ಪ್ರವೀಣ್ ಶೆಟ್ಟಿ ಬಣದವರು ಅಬಕಾರಿ ಅಬಕಾರಿ ಇನ್ಸ್ಪೆಕ್ಟರ್ ಶಿವರಾಜ್ ಅವರಿಗೆ ಸೋಮವಾರ ಮನವಿ ಪತ್ರ ನೀಡಿದರು.
ಚಿಕ್ಕದೇವಮ್ಮನವರ ದೇವಸ್ಥಾನದ ಸೇವಾ ಅಭಿವೃದ್ಧಿ ಹಾಗೂ ಹಾಲುಗಡ ಜಾತ್ರಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದೊಡ್ಡವೀರನಾಯಕ ಮಾತನಾಡಿ, ಇತಿಹಾಸ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಚಿಕ್ಕದೇವಮ್ಮನ ಬೆಟ್ಟಕ್ಕೆ ಬರುವ ಭಕ್ತರು ಹಾಲುಗಡಕ್ಕೂ ತೆರಳಿ ಪೂಜೆ ಸಲ್ಲಿಸುತ್ತಾರೆ. ಸ್ನಾನ ಮಾಡಿ ಹರಿಕೆ ತೀರಿಸುತ್ತಾರೆ. ಜೊತೆಗೆ ಪ್ರತಿವರ್ಷ ಯುಗಾದಿ ಹಬ್ಬದಂದೂ ಹಾಲುಗಡದಲ್ಲಿ ಅದ್ದೂರಿಯಾಗಿ ತಾಯಿ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ನಡೆಯುತ್ತದೆ. ಹಬ್ಬದ ದಿನಗಳಂದು ವಿಶೇಷ ಪೂಜೆ ನಡೆಯುತ್ತೆ. ಬೆಟ್ಟದ ಮೇಲೆ ನೆಲೆಸಿರುವ ತಾಯಿ ವಿಗ್ರಹವನ್ನು ಇಲ್ಲಿಗೆ ತಂದು ಶುಚಿಗೊಳಿಸಿ, ನಂತರ ಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತೆ. ಪುಣ್ಯಕ್ಷೇತ್ರದ ಸಮೀಪದಲ್ಲೇ ಬಾರ್ ತೆರೆಯುವುದು ಅಕ್ಷಮ್ಯ ಅಪರಾಧ. ಸಾವಿರಾರು ಭಕ್ತರು ಇದೇ ಮಾರ್ಗದಲ್ಲೇ ಓಡಾಡುತ್ತಾರೆ. ಬಾರ್ ತೆರೆದರೆ ಹಿಂದೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತೆ. ಅಲ್ಲದೆ ಸುತ್ತಮುತ್ತಲಿನ ಜನರು ಕುಡಿತದ ಚಟಕ್ಕೆ ದಾಸರಾಗಿ, ಜೀವನ ಕಳೆದುಕೊಳ್ಳಬೇಕಾಗುತ್ತೆ ಎಂದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಪುಟ್ಟಮಾದು, ಕರವೇ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ಕ್ರಾಂತಿಕುಮಾರ್, ಐ.ಬಿ. ರವಿಕುಮಾರ್, ಬಿಡುಗಲು ಗೋಪಾಲಕೃಷ್ಣ, ನಿಂಗರಾಜು, ಟೌನ್ ಅಧ್ಯಕ್ಷ ಮಹೇಶ್, ಚೆಲುವ, ಸೋಮಣ್ಣ, ಈಶ್ವರ್, ಗ್ರಾಮಸ್ಥರು ಇದ್ದರು.