ADVERTISEMENT

ಮೈಸೂರಿನಲ್ಲಿ ಭಾರಿ ಮಳೆ: ರಿಂಗ್ ರಸ್ತೆಯಲ್ಲಿ ಕೊಚ್ಚಿ ಹೋದ ಕಾರು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 8:34 IST
Last Updated 25 ಅಕ್ಟೋಬರ್ 2021, 8:34 IST
   

ಮೈಸೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಿದ್ದಾರ್ಥನಗರದ ಚರಂಡಿ ನೀರಿನಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದರೆ, ರಿಂಗ್ ರಸ್ತೆಯಲ್ಲಿ ಕಾರೊಂದು ನೀರಿನಲ್ಲಿ ತೇಲಿಕೊಂಡು ಹೋಗಿದೆ. ಅಗ್ನಿಶಾಮಕ ಮತ್ತು ತುರ್ತುಸೇವೆಗಳ ವಾಹನವು ಕಾರನ್ನು ತಡೆದು ಅದರಲ್ಲಿದ್ದವರನ್ನು ರಕ್ಷಿಸಿದೆ. ಆದರೆ, ಚರಂಡಿಯಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿಯ ಸುಳಿವು ಪತ್ತೆಯಾಗಿಲ್ಲ.

ಬಹುತೇಕ ಎಲ್ಲ ರಸ್ತೆಗಳಲ್ಲೂ ಕಾಲುವೆಯಂತೆ ನೀರು ಹರಿಯುತ್ತಿದೆ. ರಾಜಕಾಲುವೆಗಳು ಉಕ್ಕಿ ಹರಿಯುತ್ತಿದ್ದು ಸಮೀಪದ ನಿವಾಸಿಗಳು ತಮ್ಮ ತಮ್ಮ ಮನೆಯಿಂದ ಹೊರಬಂದಿದ್ದಾರೆ.

ಉದಯಗಿರಿ, ಸುಭಾಷ್ ನಗರ, ಸಾತಗಳ್ಳಿ, ರಿಂಗ್ ರಸ್ತೆ ಗಳಲ್ಲಿ ಹಲವು ವಾಹನಗಳು ಮುಳುಗಿವೆ.

ADVERTISEMENT

ಸಿದ್ದಾರ್ಥ‌ನಗರದ ಜಿ ಎಸ್ ಟಿ ಭವನದ ಸಮೀಪ ವ್ಯಕ್ತಿಯೊಬ್ಬರು ಕಾಲು ಜಾರಿ ಚರಂಡಿಗೆ ಬಿದ್ದರು. ನೋಡನೋಡುತ್ತಿದ್ದಂತೆ ಕೊಚ್ಚಿಕೊಂಡು ಹೋದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಬಂದಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಾಹನವು ಹುಡುಕಾಟದಲ್ಲಿ ತೊಡಗಿದೆ.

ಮಳೆ ತಡರಾತ್ರಿಯವರೆಗೂ ಬಿರುಸಾಗಿಯೇ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.