ಮೈಸೂರು: ‘ಸಾವಿರ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಯೋಜನೆಯನ್ನು ರಾಜ್ಯ ಸರ್ಕಾರದಿಂದ ಘೋಷಿಸಲಾಗಿದ್ದು, ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ಪ್ರತಾಪ ಸಿಂಹ ಸೂಚಿಸಿದರು.
ಇಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ನಗರಕ್ಕೆ ದೊರೆತಿರುವ ಯೋಜನೆಯಿಂದ ಬಹಳಷ್ಟು ಅನುಕೂಲವಾಗಲಿದೆ. ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪೂರಕವಾಗಿದೆ’ ಎಂದರು.
‘ಆ ವಿದ್ಯಾರ್ಥಿನಿಲಯಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ 2 ಎಕರೆ ಮಂಜೂರಾಗಿದೆ. ನಿರ್ಮಾಣ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಮಾಲತಿ ತಿಳಿಸಿದರು.
‘ಸಿಂಧುತ್ವ ಪ್ರಮಾಣಪತ್ರ ವಿತರಣೆಯಲ್ಲಿ ವಿಳಂಬ ಸಲ್ಲದು. ಒಬ್ಬ ನೋಡಲ್ ಅಧಿಕಾರಿ ಮಿಸಿ ಕಾಲಮಿತಿಯೊಳಗೆ ದಾಖಲೆಗಳನ್ನು ಸ್ವೀಕರಿಸಿ ಪ್ರಮಾಣಪತ್ರ ವಿತರಿಸಬೇಕು. ಹಾಸ್ಟೆಲ್ಗಳನ್ನು ದೂರದಲ್ಲಿ ನಿರ್ಮಿಸುವ ಬದಲಿಗೆ ವಿದ್ಯಾರ್ಥಿಗಳಿಗೆ ಸಮೀಪದಲ್ಲಿರುವಂತೆ ಯೋಜಿಸಬೇಕು’ ಎಂದು ಪ್ರತಾಪ ನಿರ್ದೇಶನ ನೀಡಿದರು.
‘ಮೈಸೂರು ವಿಶ್ವವಿದ್ಯಾಲಯದಿಂದ ಕುಕ್ಕರಹಳ್ಳಿ ಕೆರೆ ಮಾರ್ಗ, ಕೆಆರ್ಎಸ್ ರಸ್ತೆ ಸೇರಿ 4 ಕಡೆಗಳಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಶೋಕಪುರಂ ರೈಲು ನಿಲ್ದಾಣದಿಂದ ಜೆ.ಪಿ. ನಗರ ಕಡೆಗೆ ಪ್ರಯಾಣಿಕರು ಹೆಚ್ಚು ಸಂಚರಿಸುತ್ತಾರೆ. ಅಲ್ಲೂ ಸೇತುವೆ ನಿರ್ಮಿಸಬೇಕಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.