ADVERTISEMENT

ಶಿಲ್ಪಾ ನಾಗ್ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ರೋಹಿಣಿ ಸಿಂಧೂರಿ

ಶಿಲ್ಪಾನಾಗ್‌ ಅವರ ಬಗ್ಗೆ ನನಗೆ ಅನುಕಂಪವಿದೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 9:55 IST
Last Updated 7 ಜೂನ್ 2021, 9:55 IST
ರೋಹಿಣಿ ಸಿಂಧೂರಿ, ಪ್ರಜಾವಾಣಿ ಚಿತ್ರ
ರೋಹಿಣಿ ಸಿಂಧೂರಿ, ಪ್ರಜಾವಾಣಿ ಚಿತ್ರ   

ಮೈಸೂರು: ‘ನನಗೆ ಮೈಸೂರು ತವರೂರಿನ ಭಾವನೆ ಮೂಡಿಸಿದೆ. ಜನರ ಸಾಕಷ್ಟು ಪ್ರೀತಿ ತೋರಿಸಿ, ಮಗಳಂತೆ ನೋಡಿಕೊಂಡಿದ್ದಾರೆ. ಥ್ಯಾಂಕ್ಯೂ ಮೈಸೂರು’ ಎಂದು ರೋಹಿಣಿ ಸಿಂಧೂರಿ ಸೋಮವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವಂಥ ಸಂದರ್ಭದಲ್ಲಿ ದಿಢೀರನೇ ಆದ ಬೆಳವಣಿಗೆ ಇದು’ ಎಂದರು.

‘ಹತಾಶೆ ಹಾಗೂ ಅಭದ್ರತೆಯಿಂದ ವರ್ತಿಸಿದ ಶಿಲ್ಪಾನಾಗ್‌ ಅವರ ಬಗ್ಗೆ ನನಗೆ ಅನುಕಂಪವಿದೆ. ಅಧಿಕಾರಿಯನ್ನು ವರ್ಗಾವಣೆ ಮಾಡಿ ಗುರಿ ಸಾಧಿಸಿದ್ದೇನೆ ಅಂದುಕೊಳ್ಳುವುದು ತುಂಬಾ ತಪ್ಪು. ಜಿಲ್ಲೆಯಲ್ಲಿ ಏನು ನಡೆದಿದೆ, ಏಕಾಗಿ ನಡೆದಿದೆ ಎಂಬುದು ಈಗ ಸಾರ್ವಜನಿಕರಿಗೆ ಗೊತ್ತಾಗಿದೆ. ಯಾವುದೇ ಜಿಲ್ಲೆಯಲ್ಲಿ ಈ ರೀತಿ ಘಟನೆಗಳು ಸಂಭವಿಸಿದರೆ ವ್ಯವಸ್ಥೆ ನಿಭಾಯಿಸಿಕೊಂಡು ಹೋಗುವುದು ಕಷ್ಟ’ ಎಂದು ಹೇಳಿದರು.

ADVERTISEMENT

‘ಎಲ್ಲರನ್ನೂ ಕರೆದು ನಾಟಕವಾಡುವುದು, ರಾಜೀನಾಮೆ ವಾಪಸ್‌ ಪಡೆಯುವುದು. ಈ ರೀತಿ ಮಾಡಿದರೆ ಹೇಗೆ? ಇದನ್ನು ಶಿಲ್ಪಾನಾಗ್‌ ಅವರು ಅವಲೋಕನ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಯಾರನ್ನೋ ನಾಲ್ಕು ಮಂದಿ ಬೆಂಬಲಿಗರನ್ನು ಕಟ್ಟಿಕೊಂಡು, ಅವರ ಮಾತನ್ನು ಕೇಳಿಕೊಂಡು ನಾನು ಕೆಲಸ ಮಾಡುವುದಿಲ್ಲ. ಯಾವುದೇ ವ್ಯವಸ್ಥೆಯಲ್ಲಿ ಅದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದರು.

ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ಶುಭ ಕೋರಿದರು.

‘ಕೋವಿಡ್‌ ಸಂಬಂಧ ಏನೆಲ್ಲಾ ಕೆಲಸಗಳು ನಡೆದಿವೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದೇನೆ. ವಸ್ತುಸ್ಥಿತಿ ತಿಳಿಸಿದ್ದೇನೆ. ನನ್ನ ವರ್ಗಾವಣೆ ಆದ ಮೇಲೆ ಮೈಸೂರಿನ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ಪ್ರಶ್ನೆಗೆ ಉತ್ತರಿಸುವುದಿಲ್ಲ’ ಎಂದು ಕಾರು ಹತ್ತಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.