ADVERTISEMENT

ದೇವಾಲಯದ ಬಳಿ ಅಕ್ರಮ ಕಟ್ಟಡ ನಿರ್ಮಾಣ

ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:17 IST
Last Updated 4 ಮೇ 2019, 20:17 IST
ತಿ.ನರಸೀಪುರ ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯದ ಬಳಿ ಕಟ್ಟಡ ನಿರ್ಮಿಸುತ್ತಿರುವುದು (ಎಡಚಿತ್ರ), ಕಟ್ಟಡ ಕಾಮಗಾರಿಯನ್ನು ಪುರಾತತ್ವ ಇಲಾಖೆಯ ಎಂಜಿನಿಯರ್ ಎಸ್.ಎಂ.ಪೂಜಾರಿ ಶುಕ್ರವಾರ ಪರಿಶೀಲಿಸಿದರು
ತಿ.ನರಸೀಪುರ ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯದ ಬಳಿ ಕಟ್ಟಡ ನಿರ್ಮಿಸುತ್ತಿರುವುದು (ಎಡಚಿತ್ರ), ಕಟ್ಟಡ ಕಾಮಗಾರಿಯನ್ನು ಪುರಾತತ್ವ ಇಲಾಖೆಯ ಎಂಜಿನಿಯರ್ ಎಸ್.ಎಂ.ಪೂಜಾರಿ ಶುಕ್ರವಾರ ಪರಿಶೀಲಿಸಿದರು   

ತಿ.ನರಸೀಪುರ: ಪುರಾತತ್ವ ಇಲಾಖೆಯ ನಿಯಮಗಳನ್ನು ಮೀರಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಪಕ್ಕದಲ್ಲಿ ಶ್ರೀಅಹೋಬಲಂ ಮಠದವರು ಕಟ್ಟಡ ನಿರ್ಮಿಸಲು ಮುಂದಾಗಿರುವುದನ್ನು ಖಂಡಿಸಿ ಪಟ್ಟಣದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯವು ಪ್ರಾಚೀನ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಶ್ರೀ ಅಹೋಬಲಂ ಮಠಕ್ಕೆ ಕಟ್ಟಡ ನಿರ್ಮಿಸಲು ಪುರಾತತ್ವ ಇಲಾಖೆ ಅನುಮತಿ ನೀಡುವಾಗ ನಿಗದಿತ ಅಳತೆಯಲ್ಲಿ ಮಂಟಪ ನಿರ್ಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹಾಗೆ ಷರತ್ತುಗಳನ್ನೂ ವಿಧಿಸಲಾಗಿದೆ.

ಆದರೆ, ಕೊಟ್ಟಿರುವ ನಿಯಮಗಳನ್ನು ಗಾಳಿಗೆ ತೂರಿ ನಿಗದಿತ ಅಳತೆ ಮೀರಿ ವಿಸ್ತರಿಸಿಕೊಂಡು ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಮುಖಂಡರಾದ ಶಿವರಾಜು, ರಾಜೇಂದ್ರಪ್ರಸಾದ್ ಹಾಗೂ ಪುಟ್ಟಸ್ವಾಮಿ ಅವರು ಪ್ರಾಚೀನ ಸ್ಮಾರಕ ಹಾಗೂ ಪುರಾತತ್ವ ಇಲಾಖೆಗೆ ದೂರು ನೀಡಿದ್ದಾರೆ.

ADVERTISEMENT

ಈ ಹಿಂದೆ 5*8 ಅಡಿ ಅಹೋಬಲಂ ಮಂಟಪವಿತ್ತು. ಅದರ ಮೂಲ ಸ್ವರೂಪಕ್ಕೆ ಧಕ್ಕೆ ಯಾಗದಂತೆ ಅದೇ ಅಳತೆಯಲ್ಲಿ ಮಂಟಪ ನಿರ್ಮಿಸಿಕೊಳ್ಳಲು ಇಲಾಖೆ ಅನುಮತಿ ನೀಡಿತ್ತು. ಆದರೆ, ಮಠದವರು ಎಂದು ಹೇಳಿಕೊಂಡು ದಾಖಲೆ ಇಲ್ಲದಿದ್ದರೂ ಸ್ಥಳ ಸರ್ವೆ ನಂ.31ರ 3 ಎಕರೆ 21ಗುಂಟೆಯ ಪ್ರದೇಶದಲ್ಲಿ, 3 ಎಕರೆ 08 ಗುಂಟೆಯಷ್ಟು ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ.

ಇದರಿಂದ ಇಲಾಖೆ ನಿಯಮ ಉಲ್ಲಂಘನೆಯಾಗಿದೆ. ಹಾಗಾಗಿ ಇಲಾಖೆಗೆ ದೂರು ನೀಡಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಅಲ್ಲದೇ, ಪುರಾತತ್ವ ಇಲಾಖೆಗೆ ಸೇರಿದ ದೇವಾಲಯದ 100 ಮೀಟರ್ ಸುತ್ತಳತೆಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬಾರದು ಎಂಬ ನಿಯಮವಿದೆ. ಆದರೂ ಇವರು ಕಟ್ಟಡ ನಿರ್ಮಿಸಲು ಮುಂದಾಗಿರುವುದು ಅಧಿಕಾರಿಗಳ ನಡೆಯನ್ನು ಶಂಕಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿ ನಿಲ್ಲಿಸುವಂತೆ ಸೂಚಿಸಬೇಕು ಎಂದು ಮುಖಂಡರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.