ADVERTISEMENT

ನಂಜನಗೂಡು: ರೈಸ್ ಮಿಲ್‌ನಲ್ಲಿದ್ದ ಅಕ್ರಮ ಯೂರಿಯಾ ವಶಕ್ಕೆ

ರೈತ ಸಂಘದ ಕಾರ್ಯಕರ್ತರು ದಾಳಿ ನಡೆಸಿ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 2:47 IST
Last Updated 5 ಆಗಸ್ಟ್ 2025, 2:47 IST
ನಂಜನಗೂಡಿನ ಹುಲ್ಲಹಳ್ಳಿ ರಸ್ತೆಯ ಗೌಸಿಯಾ ರೈಸ್ ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200ಕ್ಕೂ ಹೆಚ್ಚು ಮೂಟೆ  ಯೂರಿಯಾ ದಾಸ್ತಾನನ್ನು ರೈತ ಸಂಘದ ಕಾರ್ಯಕರ್ತರು ದಾಳಿ ನಡೆಸಿ ಪತ್ತೆ ಹಚ್ಚಿರುವುದು
ನಂಜನಗೂಡಿನ ಹುಲ್ಲಹಳ್ಳಿ ರಸ್ತೆಯ ಗೌಸಿಯಾ ರೈಸ್ ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200ಕ್ಕೂ ಹೆಚ್ಚು ಮೂಟೆ  ಯೂರಿಯಾ ದಾಸ್ತಾನನ್ನು ರೈತ ಸಂಘದ ಕಾರ್ಯಕರ್ತರು ದಾಳಿ ನಡೆಸಿ ಪತ್ತೆ ಹಚ್ಚಿರುವುದು   

ನಂಜನಗೂಡು: ನಗರದ ಹುಲ್ಲಹಳ್ಳಿ ರಸ್ತೆಯ ಗೌಸಿಯಾ ರೈಸ್ ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200ಕ್ಕೂ ಹೆಚ್ಚು ಯೂರಿಯಾ ಗೊಬ್ಬರದ ದಾಸ್ತಾನನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ.

ರೈತ ಸಂಘದ ಕಾರ್ಯಕರ್ತರು ದಾಳಿ ನಡೆಸಿ ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಕೃಷಿ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ರವಿ ಯೂರಿಯಾ ವಶಕ್ಕೆ ಪಡೆದಿದ್ದಾರೆ.

ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ‘ಕಳೆದ 20 ದಿನಗಳಿಂದ ರೈಸ್ ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಯೂರಿಯಾವನ್ನು ಕೇರಳಕ್ಕೆ ವಯನಾಡಿನ ಮಹಮ್ಮದ್ ಫಾಜಿಲ್ ಎಂಬಾತ ಸಾಗಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ತೆರಳುವ ವೇಳೆ ಟ್ರಕ್‌ನಲ್ಲಿ ಒಂದು ಲೋಡ್ ಯೂರಿಯಾ ಸಾಗಿಸಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಿಲ್‌ನಲ್ಲಿ ಸಂಗ್ರಹಿಸಿದ್ದ ಯೂರಿಯಾ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕೇಂದ್ರ ಸರ್ಕಾರ ₹1477 ಬೆಲೆಯ 50 ಕೆ.ಜಿ ಯೂರಿಯಾವನ್ನು ರೈತರಿಗೆ ₹266ಕ್ಕೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಯೂರಿಯಾ ಪಡೆಯಲು ರೈತರು ದಾಖಲೆ ನೀಡಿ 2 ದಿನಗಳ ಕಾಲ ಸರದಿಯಲ್ಲಿ ನಿಂತು ಪಡೆಯಬೇಕಾಗಿದೆ. ಆದರೆ ನೂರಾರು ಮೂಟೆ ಯೂರಿಯಾ, ಕಳ್ಳಸಾಗಾಣಿಕೆದಾರರಿಗೆ ಸಿಗುವುದು ಹೇಗೆ. ಸರ್ಕಾರದ ವ್ಯವಸ್ಥೆಯಲ್ಲಿ ಲೋಪವಿದೆ. ಅಕ್ರಮ ಕಂಡು ಹಿಡಿದು, ತಡೆಯಬೇಕಾದ ಅಧಿಕಾರಿಗಳು ನಿದ್ದೆಯಲ್ಲಿದ್ದಾರೆ. ಈ ರೀತಿಯ ಅಕ್ರಮಗಳಿಂದಾಗಿ ರಾಜ್ಯದಲ್ಲಿ ರೈತರಿಗೆ ಯೂರಿಯಾ ದೊರೆಯದೆ ಕೃತಕ ಅಭಾವ ಉಂಟಾಗುತ್ತಿದೆ. ಸರ್ಕಾರ ಅಕ್ರಮ ಯೂರಿಯಾ ಸಾಗಣಿಕೆಯನ್ನು ಗಂಭೀರವಾಗಿ ಪರಿಗಣಿಸಿ ‌ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಸಹಾಯಕ ಕೃಷಿ ನಿರ್ದೇಶಕ ಎಸ್.ಕೆ.ರವಿ ಮಾತನಾಡಿ, ‘ರೈಸ್ ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ಮೂಟೆಗಳನ್ನು ವಶಕ್ಕೆ ಪಡೆದು, ಎಪಿಎಂಸಿಗೆ ಸಾಗಿಸಲಾಗಿದೆ. ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.

ಸಿಪಿಐ ಸುನೀಲ್ ಕುಮಾರ್, ರೈತ ಸಂಘದ ಹಿಮ್ಮಾವು ರಘು, ಗಾರೆ ಮದೇವ ನಾಯ್ಕ, ತಿಮ್ಮನಾಯಕ, ಮಾದೇವ ನಾಯ್ಕ, ವೇಣು ಗೋಪಾಲ್, ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.