ಮೈಸೂರು: ಇಲ್ಲಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಶನಿವಾರ ಎಂದಿನಂತೆ ನಾಟಕಗಳ ಅಬ್ಬರ ಕೇಳಿ ಬರಲಿಲ್ಲ. ಅಧ್ಯಾತ್ಮದ ಲೇಪವುಳ್ಳ ತತ್ವಪದಗಳು ಒಂದರ ಮೇಲೊಂದರಂತೆ ಕೇಳಿ ಬರತೊಡಗಿದವು. ಇಡೀ ರಂಗಮಂದಿರ ತತ್ವಮಂದಿರದಂತೆ ಒಂದರೆ ಕ್ಷಣ ಭಾಸವಾಯಿತು.
ಸಂತ ಶಿಶುನಾಳ ಷರೀಫ, ಕನಕದಾಸರು,ಕಡಕೊಳ ಮಡಿವಾಳಪ್ಪ ಸೇರಿದಂತೆ ಹಲವು ಹತ್ತು ತತ್ವಪದಕಾರರ ತತ್ಪಪದಗಳನ್ನು ಧಾರವಾಡದಬಸವಲಿಂಗಯ್ಯ ಹಿರೇಮಠ ಮತ್ತು ಅವರ ತಂಡವು ಪ್ರಸ್ತುತಪಡಿಸಿದ ರೀತಿಗೆ ಪ್ರೇಕ್ಷಕರು ತಲೆದೂಗಿದರು.
‘ನಿನ್ನೊಳಗ ನೀನು ಇಳಿದು ನೋಡಣ್ಣ’ ಎಂಬ ತತ್ವಪದವು ಎಂತಹವರನ್ನೂ ಚಿಂತನೆಗೆ ಹಚ್ಚಿತು. ‘ಗುಬ್ಬಿಯೊಂದು ಗೂಡು ಕಟ್ಯಾದೋ, ಆ ಗುಡಿನೊಳಗ ಜೀವ ಇಟ್ಟು ಎಲ್ಲಿ ಹೋಗಿದೆಯೋ’, ‘ಇಂದು ನೋಡಿರಿ ಲೋಕದ ಕಣ್ಣ... ಮಳ್ಳ ಜನರಿಗೆ ತಿಳಿಯದಲ್ಲಣ್ಣ’,‘ಸತ್ಯವಂತರ ಸಂಘವಿರಲು ತೀರ್ಥವೇತಕೆ’ ಎಂಬ ತತ್ವಪದ ಸೇರಿದಂತೆ ಹಲವು ಬಗೆಯ ತತ್ಪಪದಗಳು ಪ್ರೇಕ್ಷಕರ ಮನಗೆದ್ದವು.
ರಂಗಕರ್ಮಿ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ‘ಮೈಸೂರು ರಂಗಾಯಣ ನಾಟಕಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ ಇನ್ನಿತರೆ ಕಲೆಗಳಿಗೂ ಅವಕಾಶ ನೀಡುತ್ತಿದೆ’ ಎಂದು ಶ್ಲಾಘಿಸಿದರು.
ತತ್ವಪದ ಗಾಯಕ ಏಕತಾರಿ ರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಏಕತಾರಿ ರಾಮಯ್ಯ ಹಾಗೂ ಬಸವಲಿಂಗಯ್ಯ ಹಿರೇಮಠ ಅವರ ಕಾರ್ಯವನ್ನು ಶ್ಲಾಘಿಸಿದರು. ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.