ADVERTISEMENT

ರೇಷ್ಮೆಗೆ ಬೇಡಿಕೆ: ಉತ್ಪಾದನೆ ಹೆಚ್ಚಿಸಿ: ಪಿ.ಎಸ್‌.ಗಿರೀಶ್‌

ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಪಿ.ಎಸ್‌.ಗಿರೀಶ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:32 IST
Last Updated 4 ಮಾರ್ಚ್ 2026, 5:32 IST
ಮೈಸೂರಿನ ಉದ್ಬೂರಿನಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಮಂಗಳವಾರ ಆಯೋಜಿಸಿದ್ದ ‘ರೇಷ್ಮೆ ಕೃಷಿ ಮೇಳ’ವನ್ನು ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಪಿ.ಎಸ್‌.ಗಿರೀಶ್‌ ಉದ್ಘಾಟಿಸಿದರು. ಎನ್.ನರೇಶ್‌ ಬಾಬು, ಪ್ರೊ.ಪಿ.ದೀಪಾ, ಪ‍್ರೊ.ಗಿರಿಧರ್‌ ಪರ್ವತಂ, ಎಸ್‌.ಮಂಥಿರಾಮೂರ್ತಿ, ಬಿ.ಎಸ್‌.ನಂಜುಂಡಸ್ವಾಮಿ ಪಾಲ್ಗೊಂಡಿದ್ದರು 
ಮೈಸೂರಿನ ಉದ್ಬೂರಿನಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಮಂಗಳವಾರ ಆಯೋಜಿಸಿದ್ದ ‘ರೇಷ್ಮೆ ಕೃಷಿ ಮೇಳ’ವನ್ನು ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಪಿ.ಎಸ್‌.ಗಿರೀಶ್‌ ಉದ್ಘಾಟಿಸಿದರು. ಎನ್.ನರೇಶ್‌ ಬಾಬು, ಪ್ರೊ.ಪಿ.ದೀಪಾ, ಪ‍್ರೊ.ಗಿರಿಧರ್‌ ಪರ್ವತಂ, ಎಸ್‌.ಮಂಥಿರಾಮೂರ್ತಿ, ಬಿ.ಎಸ್‌.ನಂಜುಂಡಸ್ವಾಮಿ ಪಾಲ್ಗೊಂಡಿದ್ದರು    

ಮೈಸೂರು: ‘ರೇಷ್ಮೆ ಕೃಷಿಯು ಲಾಭದಾಯಕವಾಗಿದ್ದು, 10–20 ವರ್ಷದಲ್ಲಿ ರೇಷ್ಮೆ ಬೆಳೆಗಾರರಿಗೆ ತುಂಬ ಬೇಡಿಕೆ ಬರಲಿದೆ. ಹೀಗಾಗಿ, ತಂತ್ರಜ್ಞಾನದ ನೆರವು, ಸಾವಯವ ಕೃಷಿ ಪದ್ಧತಿ ಮೂಲಕ ರೇಷ್ಮೆ ಉತ್ಪಾದನೆಗೆ ಮುಂದಾಗಬೇಕು’ ಎಂದು ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಪಿ.ಎಸ್‌.ಗಿರೀಶ್‌ ಹೇಳಿದರು. 

ತಾಲ್ಲೂಕಿನ ಉದ್ಬೂರಿನಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಮಂಗಳವಾರ ಆಯೋಜಿಸಿದ್ದ ‘ರೇಷ್ಮೆ ಕೃಷಿ ಮೇಳ’ ಉದ್ಘಾಟಿಸಿ ಮಾತನಾಡಿ, ‘ಸುಧಾರಿತ ತಂತ್ರಜ್ಞಾನಗಳಿಂದ ಬೆಳೆಗಾರರಿಗೆ ಖರ್ಚು ಕಡಿಮೆಯಾಗಿದೆ. ಜಾಗತಿಕ ಬೇಡಿಕೆ ಹೆಚ್ಚುತ್ತಿದ್ದು, ಈಚೆಗೆ ಕೇಂದ್ರ ಸರ್ಕಾರವು ರೇಷ್ಮೆ, ಸೆಣಬು, ಹತ್ತಿ ರಫ್ತು ಹೆಚ್ಚಿಸಲು ನ್ಯಾಷನಲ್‌ ಫೈಬರ್ ಸ್ಕೀಮ್ ಅನುಷ್ಠಾನಗೊಳಿಸಿದೆ’ ಎಂದರು. 

‘ಮೊದಲೆಲ್ಲ ಕೆ.ಜಿಗೆ ₹ 350 ಇತ್ತು. ಈಗ ಸಾವಿರದವರೆಗೂ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ರೇಷ್ಮೆ ಚಿನ್ನವಾಗಲಿದೆ. ಇಡೀ ಕುಟುಂಬ ಕೆಲಸ ಮಾಡಿ ವೆಚ್ಚ ಕಡಿಮೆ ಮಾಡಿಕೊಂಡು ಇಳುವರಿ ಹೆಚ್ಚಿಸಲು ಶ್ರಮಿಸಬೇಕು. ಎನ್‌ಎಫ್‌ಎಸ್‌ ಯೋಜನೆಯಡಿ ರೈತರಿಗೆ ₹ 8 ಲಕ್ಷದವರೆಗೆ ಸಬ್ಸಿಡಿ ಸಿಗಲಿದೆ’ ಎಂದರು.  

ADVERTISEMENT

‘ರೇಷ್ಮೆ ಕೈಗಾರಿಕೆಗಳ ಆಟೊಮೆಟಿಕ್ ರೀಲಿಂಗ್ ಮಷೀನ್‌ಗಳಿಗೆ ಉತ್ತಮ ದರ್ಜೆಯ ರೇಷ್ಮೆಗೂಡುಗಳು ಬೇಕಿವೆ. ರೇಷ್ಮೆ ಕೃಷಿಯು ಕೇವಲ ನೂಲು ತೆಗೆಯಲಷ್ಟೇ ಅಲ್ಲ, ಆಹಾರ ಹಾಗೂ ಸೌಂದರ್ಯ ವರ್ಧಕಗಳ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ನೂಲು ತೆಗೆದ ನಂತರ ಮೀನು ಮತ್ತು ಕೋಳಿ ಆಹಾರವಾಗಿ ರೇಷ್ಮೆ ಗೂಡುಗಳನ್ನು ಉಪಯೋಗಿಸಲಾಗುತ್ತಿದೆ. ಶೂನ್ಯ ತ್ಯಾಜ್ಯದ ಕೃಷಿಯಾಗಿ ಬದಲಿಸಲಾಗುತ್ತಿದೆ. ಅದಕ್ಕೆ ನಿರಂತರ ಸಂಶೋಧನೆಗಳು ನಡೆದಿವೆ’ ಎಂದು ವಿವರಿಸಿದರು. 

‘ರೇಷ್ಮೆಹುಳಗಳಿಂದ ಮಾಡಿದ ಆಹಾರಕ್ಕೆ ವಿದೇಶಗಳಲ್ಲಿ ಬೇಡಿಕೆಯಿದ್ದು, ಅಲ್ಲಿಗೆ ಒಣಗಿಸಿದ ಹುಳಗಳನ್ನು (ಡ್ರೈಡ್‌ ಪ್ಯುಪಾ) ರಫ್ತು ಮಾಡಲಾಗುತ್ತಿದೆ. ಹಿಪ್ಪುನೇರಳೆ ಮತ್ತು ರೇಷ್ಮೆ ಗೂಡನ್ನು ಕಾಗದ ತಯಾರಿಕೆಗೆ ಹಾಗೂ ಕೈಟಿನ್, ಕೈಟೊಸಾನ್ ಮತ್ತು ಸೇರಿಸಿನ್‍ ಅನ್ನು ವೈದ್ಯಕೀಯ ರಂಗದಲ್ಲಿ ಬಳಸಲಾಗುತ್ತಿದೆ. ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುವಿನ ಪ್ರತಿ ಭಾಗಗಳು ಉಪಯೋಗವಾಗುತ್ತಿವೆ’ ಎಂದರು. 

ಸ್ಥಳೀಯ ಭಾಷೆ ಬಳಸಿ: ‘ಹೊಸ ತಳಿಗಳು ಯಾವುವು? ರೋಗ ನಿವಾರಣೆ ಹೇಗೆ? ಮಣ್ಣಿನ ಪರೀಕ್ಷೆ ಹೇಗೆ? ಸೇರಿದಂತೆ ರೇಷ್ಮೆ ಬೆಳೆಯ ಮಾಹಿತಿಯನ್ನು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಪ್ರಾದೇಶಿಕ ಭಾಷೆಯಲ್ಲಿಯೇ ವಿಡಿಯೊ ನಿರ್ಮಿಸಬೇಕು. ಮಂಡಳಿಯು ಬೆಳೆಗಾರರ ಜೊತೆಯಾಗಿ ನಿಂತಿದೆ. ತಂತ್ರಜ್ಞಾನವನ್ನು ಬೆಳೆಗಾರರ ಬಳಿಗೆ ಕೊಂಡೊಯ್ಯಲಿದೆ’ ಎಂದು ಗಿರೀಶ್ ತಿಳಿಸಿದರು. 

ಸಿಎಸ್‌ಆರ್‌ಟಿಐ ನಿರ್ದೇಶಕಿ ಪ್ರೊ.ಪಿ.ದೀಪಾ, ಕೇಂದ್ರ ರೇಷ್ಮೆ ಮಂಡಳಿ ಜಂಟಿ ಕಾರ್ಯದರ್ಶಿ ಎನ್.ನರೇಶ್‌ ಬಾಬು, ನಿರ್ದೇಶಕ ಎಸ್‌.ಮಂಥಿರಾಮೂರ್ತಿ, ಸದಸ್ಯ ಬಿ.ಎಸ್‌.ನಂಜುಂಡಸ್ವಾಮಿ ಪಾಲ್ಗೊಂಡಿದ್ದರು.  

- ‘ತಾಂತ್ರಿಕ ನೆರವು ನೀಡಿಕೆ’ 

‘ರೇಷ್ಮೆ ಬೆಳೆಗಾರರು ಆಹಾರೋದ್ಯಮ ಆರಂಭಿಸಲು ಅಗತ್ಯ ನೆರವನ್ನು ಸಂಸ್ಥೆಯು ನೀಡಲಿದೆ’ ಎಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ ‍ಪ‍್ರೊ.ಗಿರಿಧರ್‌ ಪರ್ವತಂ ಭರವಸೆ ನೀಡಿದರು.  ‘ಚೀನಾ ನಂತರ ಭಾರತವೇ ರೇಷ್ಮೆ ಉತ್ಪಾದನೆಯಲ್ಲಿ ಮುಂದಿದೆ. ಇಲ್ಲಿಯೇ ಬೇಡಿಕೆ ಹೆಚ್ಚಿದ್ದು ಶೇ 15ರಷ್ಟು ರೇಷ್ಮೆಯನ್ನು ಕಜಕಿಸ್ಥಾನ ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ರಫ್ತು ಮಾಡಲು ಬೆಳೆಯ ಉತ್ಪಾದನೆ ಹೆಚ್ಚಿಸಬೇಕು. ರೇಷ್ಮೆ ಗೂಡಿನಲ್ಲಿ ಶೇ 20ರಷ್ಟು ಭಾಗ ನೂಲು ತೆಗೆಯಲು ಬಳಕೆಯಾದರೆ ಉಳಿದ ಶೇ 80ರಷ್ಟು ಭಾಗದಲ್ಲಿ ಉಪ ಉತ್ಪನ್ನ ತಯಾರಿಸಬಹುದು. ಈ ಬಗ್ಗೆ ಸಂಸ್ಥೆಯು ಸಂಶೋಧನೆ ನಡೆಸಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.