ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಮಲ್ಲಿಕಾರ್ಜುನ ಖರ್ಗೆ ಜನ್ಮದಿನಾಚರಣೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಅಕ್ಕೈ ಪದ್ಮಸಾಲಿ ಅವರು ಲಿಂಗತ್ವ ಅಲ್ಪಸಂಖ್ಯಾತರಿಗೆ ಇನ್ಶುರೆನ್ಸ್ ಬಾಂಡ್ ವಿತರಿಸಿದರು
ಮೈಸೂರು: ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಜನ್ಮದಿನದ ಪ್ರಯುಕ್ತ ಮಂಗಳವಾರ ಇಲ್ಲಿನ ಕಾಂಗ್ರೆಸ್ ಭವನದಲ್ಲಿ 50 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಇನ್ಶೂರೆನ್ಸ್ ಬಾಂಡ್ ವಿತರಿಸಲಾಯಿತು.
ಬಾಂಡ್ ವಿತರಿಸಿದ ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿ, ಕೆಪಿಸಿಸಿ ಉಪಾಧ್ಯಕ್ಷರಾದ ಅಕ್ಕೈ ಪದ್ಮಸಾಲಿ, ‘1970ರಲ್ಲಿ ಮುಂಬೈನಲ್ಲಿ ಹೆಚ್ಚು ವಾಸಿಸುತ್ತಿದ್ದ ನಮ್ಮ ಸಮುದಾಯವು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿಯಾಗಿ ಕೆಲ ಸೌಲಭ್ಯಗಳನ್ನು ಕೋರಿತ್ತು. ಆಗ ದೇಶದಾದ್ಯಂತ ಉಚಿತ ರೈಲು ಪ್ರಯಾಣ ಘೋಷಿಸಿದ್ದರು. ಇಂದು ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ಸಮುದಾಯಕ್ಕೂ ಗ್ಯಾರಂಟಿಗಳನ್ನು ವಿಸ್ತರಿಸಿದೆ. ಈಗ ಇನ್ಶೂರೆನ್ಸ್ ನೀಡಿ ಹೊಸ ಭರವಸೆಗೆ ಕಾರಣವಾಗಿದೆ’ ಎಂದು ಸ್ಮರಿಸಿದರು.
ಬೇಡವಾದ ಮಕ್ಕಳ ಸ್ವೀಕಾರ:
‘ನಾವು ನಮ್ಮ ಅಪ್ಪ ಅಮ್ಮನಿಗೆ, ಅಕ್ಕಪಕ್ಕದವರಿಗೆ, ಶಿಕ್ಷಣ ವ್ಯವಸ್ಥೆಗೆ, ಸಮಾಜಕ್ಕೆ, ವೈದ್ಯಕೀಯ ಕ್ಷೇತ್ರಕ್ಕೆ ಹಾಗೂ ಸಂಸ್ಕೃತಿಗೂ ಬೇಡವಾದ ಮಕ್ಕಳು. ಲೋಕಕ್ಕೆ, ಪ್ರಕೃತಿಗೆ ಸವಾಲಾಗಿರುವ ನಮ್ಮನ್ನು ಎಲ್ಲಾ ಕಡೆ ಬೇಡ ಎನ್ನುವಾಗ ಕಾಂಗ್ರೆಸ್ ಮಾತ್ರ ‘ನೀವು ಬೇಕು’ ಎಂದು ನಮಗೆ ಅವಕಾಶಗಳನ್ನು ನೀಡುತ್ತಿದೆ’ ಎಂದು ಶ್ಲಾಘಿಸಿದರು.
ಮೈಸೂರು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರಿಗೆ ಇನ್ಶೂರೆನ್ಸ್ ಬಾಂಡ್ ವಿತರಣೆ ಮಾಡುತ್ತಿರುವುದು ರಾಜ್ಯದ ಇತಿಹಾಸದಲ್ಲಿಯೇ ಅವಿಸ್ಮರಣೀಯ ಕ್ಷಣ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಜನ್ಮದಿನವನ್ನು ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಿಲ್ಲ. ಬದಲಿಗೆ ಪುಣ್ಯದ ಕೆಲಸವನ್ನು ಮಾಡುತ್ತಿದ್ದೇವೆ’ ಎಂದರು.
‘ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಮೊದಲ ಕಂತಿನ ಹಣವನ್ನು ಕಟ್ಟಿ ಇನ್ಶೂರೆನ್ಸ್ ಮಾಡಿಸಿದ್ದು, ಮುಂದಿನ ಕಂತುಗಳನ್ನು ಕಟ್ಟಿಕೊಂಡು ಹೋಗಬೇಕು. ಅಪಘಾತಗಳು ಸಂಭವಿಸಿದಾಗ ₹ 1 ಲಕ್ಷವನ್ನು ಇನ್ಶುರೆನ್ಸ್ ಕಂಪನಿ ಕಟ್ಟಿಕೊಡಲಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರವಿ ಮಾವಿನಹಳ್ಳಿ, ನಗರ ಪ್ರಚಾರ ಸಮಿತಿ ಅಧ್ಯಕ್ಷ ರಘುರಾಜೇ ಅರಸ್, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ಪ್ರಣತಿ ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.