ADVERTISEMENT

‘ಧರ್ಮ– ಧರ್ಮಗಳ ನಡುವೆ ಮದುವೆ ಸಂವಿಧಾನ ಒಪ್ಪಿತ’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 6:08 IST
Last Updated 8 ಡಿಸೆಂಬರ್ 2020, 6:08 IST
ಮಹಿಳಾ ಆಯೋಗದ ಅಧ್ಯಕ್ಷೆ ಅರ್‌.ಪ್ರಮೀಳಾ ನಾಯ್ಡು
ಮಹಿಳಾ ಆಯೋಗದ ಅಧ್ಯಕ್ಷೆ ಅರ್‌.ಪ್ರಮೀಳಾ ನಾಯ್ಡು   

ಮೈಸೂರು: ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ನಡೆಯುವ ಮದುವೆ ಸಂವಿಧಾನ ಒಪ್ಪಿತವಾದದ್ದು. ಆದರೆ, ಆ ಮದುವೆ ಮತಾಂತರ ಕಾರಣಕ್ಕೆ ನಡೆದಿರಬಾರದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಸೋಮವಾರ ಇಲ್ಲಿ ಹೇಳಿದರು.

ಈಗ ಬಂದಿರುವ ದೂರುಗಳ ಪೈಕಿ, ಪ್ರೇಮ ವಿವಾಹಗಳಲ್ಲೇ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿರುವುದು ಕಂಡು ಬಂದಿದೆ. ಮಂಡ್ಯದಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಶೇ 10ರಷ್ಟು ಹೆಚ್ಚಾಗಿವೆ ಎಂದರು.

ಏಪ್ರಿಲ್‌ನಿಂದ ಇಲ್ಲಿಯವರೆಗೆ 1,558 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಕೌಟುಂಬಿಕ ದೌರ್ಜನ್ಯ ಹಾಗೂ ರಕ್ಷಣೆಗೆ ಮನವಿ ಮಾಡಿರುವ ಪ್ರಕರಣಗಳೇ ಹೆಚ್ಚು ಎಂದ ಅವರು, ಮನೆಯ ಹಿರಿಯ ಮಹಿಳೆಯರಿಂದ ಮಕ್ಕಳು ಆಸ್ತಿಯನ್ನೆಲ್ಲ ತಮ್ಮ ಹೆಸರಿಗೆ ಬರೆಯಿಸಿಕೊಂಡು ಅವರನ್ನು ಬೀದಿಪಾಲು ಮಾಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಲಾಕ್‌ಡೌನ್‌ ಸಮಯದಲ್ಲಿ 325 ದೂರುಗಳನ್ನು ಫೋನ್‌ ಮೂಲಕ ಹಾಗೂ 78 ದೂರುಗಳನ್ನು ಇ ಮೇಲ್‌ ಮೂಲಕ ದಾಖಲು ಮಾಡಿಕೊಳ್ಳಲಾಯಿತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.