ಮೈಸೂರು: ಪ್ರೊಬೇಷನರಿ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಮೋಸ ಮಾಡುತ್ತಿದ್ದ ವಿಜಯನಗರ ನಿವಾಸಿ ಸಿ.ಎನ್.ದಿಲೀಪ್ (36) ಎಂಬಾತನನ್ನು ಮೈಸೂರಿನ ಕೆ.ಆರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸುಳ್ಳು ಹೇಳಿಕೊಂಡು ಪೊಲೀಸ್ ಅಧಿಕಾರಿಗಳಿಂದಲೇ ಸೌಲಭ್ಯ ಪಡೆದುಕೊಳ್ಳುತ್ತಿದ್ದ ಈತನ ನಡೆ ಬಗ್ಗೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಯಾವುದೇ ಗುರುತಿನ ಚೀಟಿಯಾಗಲಿ, ಸಂಬಂಧಿತ ದಾಖಲೆಗಳಾಗಲಿ ಈ ವ್ಯಕ್ತಿಯ ಬಳಿ ಇರಲಿಲ್ಲ.
ಘಟನೆ ಹಿನ್ನೆಲೆ: ಕೆ.ಆರ್ ಠಾಣೆಯ ಇನ್ಸ್ಪೆಕ್ಟರ್ ವಿ.ನಾರಾಯಣಸ್ವಾಮಿ ಅವರಿಗೆ ತಾನು ಐಪಿಎಸ್ ಪ್ರೊಬೇಷನರಿ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ್ದಾನೆ. ತಾನು ಮತ್ತು ತನ್ನ ಕುಟುಂಬ ಸದಸ್ಯರು ಪ್ರವಾಸ ಹೋಗಬೇಕಿದ್ದು, ಒಂದು ಇನೋವಾ ಕಾರು ಕಳುಹಿಸಿಕೊಡುವಂತೆ ಸೂಚಿಸಿದ್ದಾನೆ. ಅಲ್ಲದೇ, ಕಾರಿನ ಬಾಡಿಗೆ ಮೊತ್ತ, ಚಾಲಕರ ಸಂಬಳ ಮತ್ತು ಬಾಟವನ್ನು ಕೊಡುವಂತೆಯೂ ಆದೇಶಿಸಿದ್ದಾನೆ. ಇದರಿಂದ ಅನುಮಾನಗೊಂಡ ನಾರಾಯಣಸ್ವಾಮಿ, ಇಬ್ಬರು ಪೊಲೀಸರನ್ನು ದಿಲೀಪ್ ಮನೆ ಬಳಿ ಪರಿಶೀಲನೆಗೆ ಕಳಿಸಿದ್ದಾರೆ. ಈ ವೇಳೆ ದಿಲೀಪ್ ಐಪಿಎಸ್ ಅಧಿಕಾರಿಯಲ್ಲ ಎಂಬುದು ಗೊತ್ತಾಗಿದೆ. ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ತಾನು ಐಪಿಎಸ್ ಅಧಿಕಾರಿಯಲ್ಲ ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.