ಮೈಸೂರು: ಇಲ್ಲಿನ ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದಲ್ಲಿ (ಎಂಎಂಸಿಆರ್ಐ) ಸರ್ಕಾರಿ ‘ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಷನ್– ಕೃತಕ ಗರ್ಭಧಾರಣೆ ಕೇಂದ್ರ) ಕ್ಲಿನಿಕ್’ ಸ್ಥಾಪನೆ ಕಾರ್ಯ ಎರಡು ವರ್ಷಗಳಾದರೂ ನಡೆದಿಲ್ಲ.
2023ರ ಫೆಬ್ರುವರಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ಬಜೆಟ್ನಲ್ಲಿ ಈ ಯೋಜನೆ ಘೋಷಣೆ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ಈ ಕ್ಲಿನಿಕ್ ಸ್ಥಾಪನೆ ಬಗ್ಗೆ ಉಲ್ಲೇಖಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಯು ಮೈಸೂರಿನಲ್ಲಿ ಇನ್ನೂ ಪೂರ್ವಸಿದ್ಧತೆಯ ಹಂತದಲ್ಲೇ ಇದೆ.
‘ಐವಿಎಫ್’ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಆಗಿರುವುದರಿಂದಾಗಿ, ಬಡವರು ಹಾಗೂ ಮಧ್ಯಮ ವರ್ಗದವರಿಗೂ ಕೈಗೆಟುಕಬೇಕು ಎಂಬ ಉದ್ದೇಶದಿಂದ ಸರ್ಕಾರದಿಂದಲೇ ಕ್ಲಿನಿಕ್ ಆರಂಭಿಸಲು ಯೋಜಿಸಲಾಗಿದೆ. ಈವರೆಗೆ ಸಿವಿಲ್ ಕಾಮಗಾರಿಯೂ ಆರಂಭವಾಗಿಲ್ಲ.
ಕ್ಲಿನಿಕ್ ಸ್ಥಾಪನೆಗೆ ₹ 2.50 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಂಎಂಸಿಆರ್ಐ ನಿರ್ದೇಶಕಿ ಡಾ.ಕೆ.ಆರ್. ದಾಕ್ಷಾಯಿಣಿ, ‘ಸಂಸ್ಥೆಯ ಕೆ.ಆರ್. ಆಸ್ಪತ್ರೆಯ ಒಪಿಡಿ ಬ್ಲಾಕ್ ಮೇಲೆ ಕಟ್ಟಡ ನಿರ್ಮಿಸಲು ಅನುಮತಿ ಪಡೆದುಕೊಳ್ಳಲಾಗಿದೆ. ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಆಗಬೇಕಾಗಿದೆ. ತಗಲುವ ವೆಚ್ಚವನ್ನು ಆಂತರಿಕ ಸಂಪನ್ಮೂಲದಲ್ಲೇ ಭರಿಸುವಂತೆ ಸರ್ಕಾರ ತಿಳಿಸಿದೆ. ತಜ್ಞ ವೈದ್ಯರ ಕೊಠಡಿಗಳು, ಪ್ರಯೋಗಾಲಯ, ನೋಂದಣಿ ಕೌಂಟರ್, ಸಮಾಲೋಚನಾ ಕೊಠಡಿ ಮೊದಲಾದವು ಸೇರಿದಂತೆ ಕನಿಷ್ಠ 8ರಿಂದ 10 ವಿಭಾಗಗಳು ಇರಬೇಕಾಗುತ್ತದೆ. ಐವಿಎಫ್ಗೆ ನಿಗದಿಪಡಿಸಿದ ಮಾನದಂಡದ ಮೂಲಕ ಎಲ್ಲವನ್ನೂ ಸಿದ್ಧಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಏನೇನು ಬೇಕು?: ‘ಅತ್ಯಾಧುನಿಕ ಯಂತ್ರೋಪಕಣಗಳು, ಸಲಕರಣೆಗಳು ಬೇಕಾಗುತ್ತವೆ. ಇದಕ್ಕಾಗಿ ₹ 63 ಲಕ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ತಂತ್ರಜ್ಞರನ್ನು ಬಳಸಬೇಕಾಗುತ್ತದೆ. ನಮ್ಮಲ್ಲಿರುವವರಿಗೇ ತರಬೇತಿ ನೀಡಿ ಸಜ್ಜುಗೊಳಿಸಲಾಗುವುದು. ಐವಿಎಫ್ ಸೇವೆ ಲಭ್ಯವಿದೆಯೇ ಎಂದು ನಮ್ಮಲ್ಲಿ ವಿಚಾರಣೆ ಬರುತ್ತಿರುತ್ತವೆ. ‘ಆ ವಿಧಾನ’ದಲ್ಲಿ ಮಗು ಪಡೆಯಬೇಕು ಎಂದು ಬಯಸುವವರಿಗೆ ಈ ಕ್ಲಿನಿಕ್ ಸಹಕಾರಿಯಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಸೇವೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ನಮ್ಮಲ್ಲಿ ಆರಂಭವಾದರೆ ಅನುಕೂಲ ಆಗುತ್ತದೆ. ಕಡಿಮೆ ವೆಚ್ಚದಲ್ಲಿ ಸೇವೆ ಪಡೆಯಬಹುದಾಗಿದೆ. ನಿರ್ದಿಷ್ಟವಾಗಿ ಎಷ್ಟು ಶುಲ್ಕ ಕಟ್ಟಬೇಕಾಗುತ್ತದೆ ಎಂಬುದನ್ನು ಕ್ಲಿನಿಕ್ ಸಿದ್ಧವಾದ ನಂತರ ಅಂತಿಮಗೊಳಿಸಲಾಗುವುದು’ ಎನ್ನುತ್ತಾರೆ ಅವರು.
‘ಡೇ ಕೇರ್ (ಹೊರರೋಗಿಗಳ ವಿಭಾಗ)ನಂತೆ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ. ಇದನ್ನು ಐವಿಎಫ್ಗೆ ಸಂಬಂಧಿಸಿದಂತೆ ತಜ್ಞ ವೈದ್ಯರು ನಿರ್ವಹಿಸುತ್ತಾರೆ. ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿ, ಅಗತ್ಯ ಸಿಬ್ಬಂದಿಯನ್ನು ಪಡೆದುಕೊಳ್ಳಲಾಗುವುದು. ಈ ಸರ್ಕಾರಿ ಕ್ಲಿನಿಕ್ನಿಂದ ಮೈಸೂರು ಭಾಗದ ಜಿಲ್ಲೆಗಳವರಿಗೆ ಅನುಕೂಲವಾಗಲಿದೆ. ಅಲ್ಲದೇ, ಹೆಚ್ಚಿನ ಹಣ ಖರ್ಚು ಮಾಡಬೇಕಾದ ಅನಿವಾರ್ಯವೂ ತಪ್ಪಲಿದೆ’ ಎಂದು ಅವರು ತಿಳಿಸಿದರು.
ತಾಯ್ತನದ ಹಂಬಲ ಪೂರೈಸಿಕೊಳ್ಳಬೇಕೆಂದು ಬಯಸುವ ಬಡ ಮಧ್ಯಮ ವರ್ಗದವರಿಗೆ ಸರ್ಕಾರಿ ಐವಿಎಫ್ ಕ್ಲಿನಿಕ್ ಸಹಕಾರಿಯಾಗಲಿದೆ. ತ್ವರಿತವಾಗಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆಡಾ.ಕೆ.ಆರ್. ದಾಕ್ಷಾಯಿಣಿ ನಿರ್ದೇಶಕಿ ಎಂಎಂಸಿಆರ್ಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.