
ಮೈಸೂರು: ಇಲ್ಲಿನ ಬನ್ನಿಮಂಟಪದ ಜೆಎಸ್ಎಸ್ ಫಾರ್ಮಸಿ ಕಾಲೇಜು ವತಿಯಿಂದ ಕೈಗೊಳ್ಳಲಾಗುತ್ತಿರುವ ಜಪಾನ್ನ ‘ಜಿಕಾ’ ಬೆಂಬಲಿತ ‘ಇಂಪ್ಯಾಕ್ಟ್– ವಿಐಪಿ’ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜ.19ರಂದು ಬೆಳಿಗ್ಗೆ 10.30ಕ್ಕೆ ದುಂಡುಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ.
‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪಾಲ್ಗೊಳ್ಳುವರು. ಜೆಎಸ್ಎಸ್– ಎಎಚ್ಇಆರ್ ಪ್ರತಿನಿಧಿಗಳಾದ ಬಿ. ಸುರೇಶ್, ಡಾ.ಎಚ್. ಬಸವನಗೌಡಪ್ಪ, ಡಾ.ಬಿ. ಮಂಜುನಾಥ್ ಭಾಗವಹಿಸುವರು’ ಎಂದು ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ದೃಷ್ಟಿದೋಷವುಳ್ಳವರು ತಾವು ಸೇವಿಸುವ ಔಷಧಿ ಯಾವುದು ಎಂಬುದನ್ನು ಕ್ಯೂಆರ್ಕೋಡ್ ಸ್ಕ್ಯಾನ್ ಮಾಡಿ ಧ್ವನಿಯ (ಆಡಿಯೊ) ಮೂಲಕ ತಿಳಿದುಕೊಳ್ಳಬಹುದಾದ ಜಪಾನ್ನ ತಂತ್ರಜ್ಞಾನವನ್ನು ಇಲ್ಲೂ ಪರಿಚಯಿಸಲು ಸಹಯೋಗ ಪಡೆದುಕೊಳ್ಳಲು ಕಾಲೇಜಿನಿಂದ ಪ್ರಯತ್ನಿಸಲಾಗುತ್ತಿದೆ. ಇದರ ಭಾಗವಾಗಿ ಚರ್ಚಿಸಲು ದುಂಡು ಮೇಜಿನ ಸಭೆ ನಿಗದಿಯಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಕೆಲವು ಭಾಷೆಗಳಲ್ಲಿ ಸಂದೇಶ ದೊರೆಯುವಂತೆ ಮಾಡಲಾಗುವುದು. ಇದಕ್ಕಾಗಿ ಬಳಕೆಯ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಫಲಿತಾಂಶವನ್ನು ಸಭೆಯಲ್ಲಿ ಮಂಡಿಸಲಾಗುವುದು. ಆರೋಗ್ಯ ಇಲಾಖೆಯು ಹೇಗೆ ಸಹಯೋಗ ನೀಡಬಹುದು ಎಂಬುದನ್ನು ಚರ್ಚಿಸಲಾಗುವುದು’ ಎಂದರು.
ಡಾ.ಶ್ರೀಹರ್ಷ ಚಲ್ಲಸಾನಿ ಹಾಗೂ ಡಾ.ನಂದನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.