ADVERTISEMENT

ಬಿಜೆಪಿ 3ನೇ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಕಾರಣ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 12:36 IST
Last Updated 11 ಜೂನ್ 2022, 12:36 IST
ಬಿಜೆಪಿ 3ನೇ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಕಾರಣ: ಸಿದ್ದರಾಮಯ್ಯ
ಬಿಜೆಪಿ 3ನೇ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಕಾರಣ: ಸಿದ್ದರಾಮಯ್ಯ   

ಮೈಸೂರು: ‘ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ 3ನೇ ಅಭ್ಯರ್ಥಿ ಗೆಲ್ಲಲು ಜೆಡಿಎಸ್‌ ಕಾರಣವೇ ಹೊರತು ನಾವಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಪತ್ರಕರ್ತರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದನ್ನು ಗಮನಿಸಿನೆ. ನಾವು ಹೇಗೆ ಕಾರಣವಾಗುತ್ತೇವೆ, ಅವರೇ ಅಲ್ಲವೇ?’ ಎಂದು ಕೇಳಿದರು.

‘2ನೇ ಅಭ್ಯರ್ಥಿಯನ್ನು ಮೊದಲು ಘೋಷಿಸಿದವರು ಮತ್ತು ನಾಮಪತ್ರ ಸಲ್ಲಿಸಿದ್ದವರು ನಾವು. ಆ ಬಳಿಕ ಜೆಡಿಎಸ್‌ನವರು ಅಭ್ಯರ್ಥಿ ಹಾಕಿದರು. ಬಿಜೆಪಿಯ 3ನೇ ಅಭ್ಯರ್ಥಿ ಗೆಲ್ಲಬಾರದೆಂಬ ಉದ್ದೇಶವಿದ್ದಿದ್ದರೆ ಮತ್ತು ಜಾತ್ಯತೀತ ನಿಲುವಿನ ಮೇಲೆ ನಂಬಿಕೆ ಇದ್ದಿದ್ದರೆ ಜೆಡಿಎಸ್‌ನವರು ಅಭ್ಯರ್ಥಿ ಕಣಕ್ಕಿಳಿಸಬಾರದಿತ್ತಲ್ಲವೇ?’ ಎಂದು ತಿರುಗೇಟು ನೀಡಿದರು.

ADVERTISEMENT

‘ಎಚ್.ಡಿ. ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಿದ್ದಾಗ ನಾವು ಅಭ್ಯರ್ಥಿ ಹಾಕಿದ್ವಾ? ಆ ರೀತಿ ಅವರೂ ಬೆಂಬಲಿಸಬೇಕಿತ್ತು. ಅವರು ಮುಖ್ಯಮಂತ್ರಿ ಆಗುವುದಕ್ಕೆ ನಾವು ಬೆಂಬಲಿಸಿರಲಿಲ್ಲವೇ? ಅಲ್ಪಸಂಖ್ಯಾತ ಅಭ್ಯರ್ಥಿ ಸೋಲಲು, ಕೋಮುವಾದಿ ಬಿಜೆಪಿ ಗೆಲ್ಲಲು ಜೆಡಿಎಸ್‌ನವರೇ ಕಾರಣ’ ಎಂದು ಆರೋಪಿಸಿದರು.

‘ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದಲೇ ನಾವು ಕೆಟ್ಟಿದ್ದು. ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ತೊಡಕಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.