ADVERTISEMENT

ಮೈಸೂರು | ಉದ್ಯೋಗ ಮೇಳ: ಆಕಾಂಕ್ಷಿಗಳ ದಂಡು

ಮೈಸೂರು ವಿಭಾಗದ 8 ಜಿಲ್ಲೆಗಳ 13,289 ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 9:34 IST
Last Updated 18 ಅಕ್ಟೋಬರ್ 2025, 9:34 IST
ಮೈಸೂರಿನ ಮಹಾರಾಜ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಹೆಸರು ನೋಂದಾಯಿಸಲು ಸರದಿಯಲ್ಲಿ ನಿಂತ ಆಕಾಂಕ್ಷಿಗಳು  ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಮೈಸೂರಿನ ಮಹಾರಾಜ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಹೆಸರು ನೋಂದಾಯಿಸಲು ಸರದಿಯಲ್ಲಿ ನಿಂತ ಆಕಾಂಕ್ಷಿಗಳು  ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.   

ಮೈಸೂರು: ಪದವೀಧರರಲ್ಲದೇ ಡಿ‍ಪ್ಲೊಮಾ, ಐಟಿಐ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಪೂರೈಸಿದ್ದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅಲ್ಲಿ ಜಮಾಯಿಸಿದ್ದರು. ಬಿಸಿಲೆನ್ನದೇ ಸರದಿಯಲ್ಲಿ ನಿಂತು ಕಾದರು. ಅವರೊಂದಿಗೆ ಬಂದಿದ್ದ ಪೋಷಕರು ತಮ್ಮ ಮಕ್ಕಳು ಸಂದರ್ಶನ ಮುಗಿಸಿ ಬರುವುದನ್ನೇ ನೋಡುತ್ತಾ ನಿಂತಿದ್ದರು. 

ಇದು, ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಕಂಡುಬಂದ ಚಿತ್ರಣ. 

ಬೆಳಿಗ್ಗೆ 9ರಿಂದಲೇ ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡು‍‍ಪಿ, ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಆಕಾಂಕ್ಷಿಗಳು ಬಂದಿದ್ದರು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದವರು ಹಾಗೂ ನೇರವಾಗಿ ಅರ್ಜಿ ಸಲ್ಲಿಸಲು ಬಂದವರು ಸರದಿಯಲ್ಲಿ ಕಾದರು. 3 ಗಂಟೆ ಕಾದ ನಂತರ ಸಂದರ್ಶನಕ್ಕೆ ಅವಕಾಶ ಸಿಕ್ಕಿತು.

ADVERTISEMENT

ಸ್ಥಳದಲ್ಲೇ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹೆಸರು ನೋಂದಾಯಿಸಿಕೊಳ್ಳುವ ಅವಕಾಶವನ್ನೂ ನೀಡಲಾಗಿತ್ತು. ಅಲ್ಲದೇ ಮೈದಾನದ ಆವರಣದಲ್ಲಿನ 60 ಮಳಿಗೆಗಳಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯೂ ನಡೆಯಿತು.

ಒಬ್ಬ ಅಭ್ಯರ್ಥಿಗೆ ಐದು ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವ ಟೋಕನ್‌ ಅನ್ನು ನೀಡಲಾಗಿತ್ತು. ಮಹಾರಾಜ ಹಾಗೂ ಯುವರಾಜ ಕಾಲೇಜಿನ 80 ಕೊಠಡಿಗಳಲ್ಲಿ ಕೈಗಾರಿಕೆಗಳು, ವಾಹನ ಉತ್ಪಾದನಾ ಉದ್ಯಮಗಳು, ಬ್ಯಾಂಕಿಂಗ್‌, ಹೋಟೆಲ್‌ ಉದ್ಯಮದ ಕಂಪನಿಗಳೂ ಸೇರಿದಂತೆ 235ಕ್ಕೂ ಹೆಚ್ಚು ವಿವಿಧ ಕಂಪನಿಗಳ ಸಿಬ್ಬಂದಿ ಅರ್ಜಿಗಳನ್ನು ಸ್ವೀಕರಿಸಿದರಲ್ಲದೇ, ಕಂಪನಿ ಸಂದರ್ಶನಕ್ಕೆ ಸಂದೇಶ ಕಳುಹಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಯೋಗ ಮೇಳ ಉದ್ಘಾಟಿಸಿದರು. 

ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ ಆರ್‌.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌, ಶಾಸಕರಾದ ತನ್ವೀರ್‌ ಸೇಠ್‌, ಸಿ.ಪುಟ್ಟರಂಗಶೆಟ್ಟಿ, ಡಿ.ರವಿಶಂಕರ್‌, ವಿಧಾನಪರಿಷತ್‌ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ  ರಂಗಸ್ವಾಮಿ, ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಶಾಹೀದ್, ಕರಾವಳಿ ಅಭಿವೃದ್ಧಿ ನಿಗಮದ ಎಂ.ಎ.ಗಫೂರ್, ಪ್ಯಾರಿ ಜಾನ್, ವಿಶ್ವಾಸ್‌ ಕುಮಾರ್ ದಾಸ್‌, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸೀಫ್ ಪಾಲ್ಗೊಂಡಿದ್ದರು.   

ಐಟಿಐ ಮಾಡಿರುವೆ. ಇದೇ ಮೊದಲ ಬಾರಿ ಮೇಳಕ್ಕೆ ಉದ್ಯೋಗ ಸಿಗುವ ಭರವಸೆಯಲ್ಲಿ ಬಂದಿರುವೆ. ಎಲ್ಲ ವ್ಯವಸ್ಥೆ ಚೆನ್ನಾಗಿತ್ತು. ಸಂದರ್ಶನದ ಅನುಭವ ಸಿಕ್ಕಿತು.
ಎಂ.ಎ.ಪ್ರೀತಮ್ ಮಂಡ್ಯ
ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್ ಮಾಡಿರುವೆ. ಆಕ್ಸೆಂಚರ್ ಆಟೊಮೆಟಿವ್ ಎಕ್ಸೆಲ್ ಟಾಟಾ ಕ್ಯಾಪಿಟಲ್ ಕಂಪನಿಗಳಿಗೆ ಅರ್ಜಿ ಹಾಕಿದ್ದೇನೆ.
ದರ್ಶನ್‌ ಪಿರಿಯಾಪಟ್ಟಣ  

‘ಕೌಶಲ ತರಬೇತಿ ಪಡೆಯಿರಿ’ ‘ನಿರುದ್ಯೋಗ ದೇಶದ ದೊಡ್ಡ ಸಮಸ್ಯೆಯಾಗಿದ್ದು ಅದನ್ನು ತೊಡೆದುಹಾಕಲು ಸರ್ಕಾರವು ಪ್ರತಿ ಜಿಲ್ಲೆಯಲ್ಲೂ ಉದ್ಯೋಗ ಮೇಳ ಆಯೋಜಿಸುತ್ತಿದೆ. ಕೌಶಲಾಭಿವೃದ್ಧಿ ಇಲಾಖೆಯು ಆಯೋಜಿಸುವ ತರಬೇತಿಗಳಲ್ಲಿ ಕೌಶಲ ಪಡೆದು ಉದ್ಯೋಗ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ ಆರ್‌.ಪಾಟೀಲ ಸಲಹೆ ನೀಡಿದರು.  ‘ಯುವ ಸಮುದಾಯವು ಉತ್ತಮ ಭವಿಷ್ಯ ರೂಪಿಸಲು ಕಲಬುರಗಿ ಕೊಪ್ಪಳ ವರುಣದಲ್ಲಿ ಬಹುಕೌಶಲ ಕೇಂದ್ರಗಳನ್ನು ತೆರೆಯಕಲಾಗಿದೆ. ಡಿಪ್ಲೊಮಾ ಕೋರ್ಸ್ ಮಾಡಿರುವವರಿಗೆ ಶೇ 100ರಷ್ಟು ಉದ್ಯೋಗ ಸಿಗುತ್ತಿದೆ. ಕೆಎಸ್‌ಡಿಸಿಯಿಂದ ಹೊರ ದೇಶಗಳಲ್ಲೂ ಕೆಲಸ ಕೊಡುವ ಪ್ರಯತ್ನ ನಡೆದಿದೆ’ ಎಂದರು. 

1346 ಮಂದಿಗೆ ನೌಕರಿ  ‘ಮೇಳದಲ್ಲಿ ಪಾಲ್ಗೊಂಡ 13289 ಅಭ್ಯರ್ಥಿಗಳಲ್ಲಿ 1346 ಮಂದಿ ಉದ್ಯೋಗ ಪಡೆದುಕೊಂಡರು. ಇನ್ನೂ 3303 ಮಂದಿ ಹೆಸರನ್ನು ಕಾಯ್ದಿರಿಸಲಾಗಿದ್ದು ಕಂಪನಿಗಳು ತರಬೇತಿ ನೀಡಿ ಅವರನ್ನೂ ಆಯ್ಕೆ ಮಾಡಿಕೊಳ್ಳಲಿವೆ’ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಾರಾಯಣಮೂರ್ತಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.