ADVERTISEMENT

ಕೆಎಸ್‌ಒಯು: ಪ್ರಾದೇಶಿಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 3:13 IST
Last Updated 6 ಮಾರ್ಚ್ 2021, 3:13 IST
ಕೆ.ಎಸ್‌.ಶಿವರಾಮು
ಕೆ.ಎಸ್‌.ಶಿವರಾಮು   

ಮೈಸೂರು: ಮಾಗಡಿಯ ತಿಪ್ಪಸಂದ್ರ ಗ್ರಾಮದ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗದಲ್ಲಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) ಪ್ರಾದೇಶಿಕ ಕೇಂದ್ರ ನಿರ್ಮಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ.

‘ಪ್ರಾದೇಶಿಕ ಕೇಂದ್ರಕ್ಕಾಗಿ, ಇಲ್ಲಿ ₹ 25 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಕೆಎಸ್‌ಒಯು ವ್ಯವಸ್ಥಾಪನಾ ಮಂಡಳಿಯು ತೀರ್ಮಾನಿಸಿದೆ. ಕೆಎಸ್‌ಒಯು ಮೊದಲೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಇಂತಹ ಬೃಹತ್ ವೆಚ್ಚದ ಕಟ್ಟಡ ಕಾಮಗಾರಿ ಬೇಕಿತ್ತೇ‘ ಎಂದು ವ್ಯವಸ್ಥಾಪನಾ ಮಂಡಳಿಯ ಮಾಜಿ ಸದಸ್ಯ ಕೆ.ಎಸ್.ಶಿವರಾಮು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಾದೇಶಿಕ ಕೇಂದ್ರಗಳ ಬಗ್ಗೆ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಸತ್ಯ ಶೋಧನಾ ಸಮಿತಿಯು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಮಿತಿಯ ವರದಿಯನ್ನು ಜಾರಿಗೆ ತರುವುದಾಗಿ ಕೆಎಸ್‌ಒಯು ಹೈಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ. ಹೀಗಿದ್ದರೂ, ಮತ್ತೆ ಇಂತಹ ಕಟ್ಟಡ ಕಾಮಗಾರಿ ಕೈಗೊಳ್ಳುವುದು ಸರಿಯಲ್ಲ ಎಂದರು.

ADVERTISEMENT

‘ಈಗಾಗಲೇ ಇರುವ ಪ್ರಾದೇಶಿಕ ಕೇಂದ್ರಗಳು ಕೆಎಸ್‌ಒಯು ಪಾಲಿಗೆ ಬಿಳಿಯಾನೆಗಳಂತಾಗಿವೆ. ಇವುಗಳಲ್ಲಿ ಸುಮಾರು 200 ಮಂದಿಯಷ್ಟೇ ಪ್ರವೇಶ ಪಡೆಯುತ್ತಾರೆ. ಆದರೆ, ನಿರ್ವಹಣೆಗೆ ಲಕ್ಷಾಂತರ ರೂಪಾಯಿಯನ್ನು ವೆಚ್ಚ ಮಾಡಲಾಗುತ್ತಿದೆ. ಮತ್ತೆ ಇಂತಹ ಕಟ್ಟಡ ಕಾಮಗಾರಿ ಕೈಗೊಳ್ಳುವುದರ ಹಿಂದೆ ‘ಕಮಿಷನ್‌ ದಂಧೆ’ ಇದ್ದಿರಬಹುದು’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಒಂದು ವೇಳೆ ಈ ಯೋಜನೆಯನ್ನು ಕೈಬಿಡದಿದ್ದಲ್ಲಿ, ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು. ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.