ಮೈಸೂರು: ಇಲ್ಲಿನ ಸಿದ್ಧಾರ್ಥನಗರದಲ್ಲಿರುವ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜು (ಕಾವಾ) ಆವರಣ ಭಾನುವಾರ ವಿವಿಧ ಪ್ರಕಾರದ ಕಲೆಗಳಿಂದ ‘ಸಿಂಗಾರ’ಗೊಂಡಿತ್ತು. ಅಲ್ಲಿ ನಡೆದ ಕಲಾಜಾತ್ರೆಯು ನಾಡಹಬ್ಬ ದಸರೆಗೆ ಮೆರುಗು ನೀಡಿತು.
ಲಲಿತಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿಯಿಂದ, ಕಲಾವಿದರು ಹಾಗೂ ಕಲಾಸಕ್ತರ ನಡುವೆ ವೇದಿಕೆ ಕಲ್ಪಿಸುವ, ಜನಸಾಮಾನ್ಯರು, ವಿದ್ಯಾರ್ಥಿಗಳು ಮತ್ತು ಉದಯೋನ್ಮುಖ ಕಲಾವಿದರಿಗೆ ಅವಕಾಶ ಒದಗಿಸಲು ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉಚಿತವಾಗಿ ಮಳಿಗೆಗಳನ್ನು ಒದಗಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಲಾವಿದರು, ಕಲಾಸಂಸ್ಥೆಗಳು ತಮ್ಮ ಕಲಾಕೃತಿಗಳನ್ನು, ಉತ್ಪನ್ನಗಳನ್ನು ಪ್ರದರ್ಶಿಸಿದರು. ಇದರೊಂದಿಗೆ ಅವರ ಸೃಜನಶೀಲತೆಯನ್ನೂ ವ್ಯಕ್ತಪಡಿಸಿದರು.
ಕರ್ನಾಟಕ ಕಲಾ ರತ್ನ ರೂಪಾ ವಸುಂಧರ ಅವರ ಒಣ ಎಲೆ, ಹೂವಿನಿಂದ ರಚಿಸಿರುವ ಚಿತ್ರಕಲೆ, ಮನುಷ್ಯ ತನ್ನ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದ ಮಹತ್ವವನ್ನು ಬಿಂಬಿಸುವ ಕಲಾವಿದ ಎ.ಆರ್.ಮಂಜುನಾಥ್ ಅವರ ಕಲಾಕೃತಿಗಳು ಗಮನಸೆಳೆದವು. ಪ್ರಸಿದ್ಧ ಸಾಹಿತಿಗಳು, ಮೈಸೂರು ಅರಮನೆ, ನಂದಿ, ಚಾಮುಂಡಿಬೆಟ್ಟದ ಗೋಪುರ, ದೊಡ್ಡ ಗಡಿಯಾರ ಹಾಗೂ ಚಿತ್ರನಟರ ಸ್ಕೆಚ್ ಆರ್ಟ್, ಹಲವು ವಿದ್ಯಾರ್ಥಿಗಳಿಂದ ಸಿದ್ಧವಾದ ಮಂಡಲ ಕಲೆ ಮೊದಲಾದವು ಗಮನಸೆಳೆದವು.
ಇಲ್ಲಿ ನಡೆದ ಶಿಬಿರದಲ್ಲಿ ಶಿಲ್ಪಕಲಾ ಕಲಾವಿದರು ಸಿದ್ಧಪಡಿಸಿರುವ ಭಿತ್ತಿಶಿಲ್ಪಗಳು ಕಾವಾದ ಗೋಡೆಗಳನ್ನು ಅಲಂಕರಿಸಿ, ಕಲಾತ್ಮಕ ಮೆರುಗು ನೀಡುತ್ತಿದೆ. ಮೈಸೂರು ಸಾಂಪ್ರದಾಯಿಕ ಕಲೆ ಆಕರ್ಷಿಸಿತು.
ಚಿತ್ರಕಲೆ, ಅನ್ವಯಿಕ ಕಲೆ, ಛಾಯಾಚಿತ್ರ, ಶಿಲ್ಪಕಲೆ, ಸಾಂಪ್ರದಾಯಿಕ ಚಿತ್ರಕಲೆ, ಕರಕುಶಲ ಕಲೆ, ಗ್ರಾಫಿಕ್ ಕಲೆ, ಸ್ಥಳದಲ್ಲೇ ಚಿತ್ರಬಿಡಿಸುವುದು, ಜೇಡಿ ಮಣ್ಣಿನ ಕಲಾಕೃತಿಗಳ ತಯಾರಿ ಸೇರಿದಂತೆ 13 ವಿಭಾಗಗಳಲ್ಲಿ ವಿಜೇತರಾದ 39 ಮಂದಿಗೆ ಬಹುಮಾನ ವಿತರಿಸಲಾಯಿತು.
ಕಲಾಜಾತ್ರೆಗೆ ಚಾಲನೆ ನೀಡಿದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ‘ಪ್ರಸ್ತುತ ಸಾಂಪ್ರದಾಯಿಕ ಕಲೆಗಳ ಕಲಿಕೆ ದೊಡ್ಡ ಸವಾಲಾಗಿದೆ. ಪೋಷಕರು ಇಂಗ್ಲಿಷ್ ವ್ಯಾಮೋಹದಲ್ಲಿ ಮುಳುಗಿರುವುದರಿಂದಲೋ ಅಥವಾ ಮಕ್ಕಳನ್ನು ವೈದ್ಯ, ಎಂಜಿನಿಯರ್ ವೃತ್ತಿಯಲ್ಲಿ ನೋಡುವ ಹೆಬ್ಬಯಕೆಯೋ ಇದಕ್ಕೆ ಕಾರಣವಾಗಿದೆ. ಸಾಂಪ್ರದಾಯಿಕ ಕಲೆಗಳ ಕಲಿಕೆಯ ಮೂಲಕ ಅದನ್ನೇ ವೃತ್ತಿ ಮಾಡಿಕೊಳ್ಳಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ’ ಎಂದು ಹೇಳಿದರು.
‘ಪ್ರಸ್ತುತ ಪ್ರತಿ ವಸ್ತುಗಳ ತಯಾರಿಯಲ್ಲಿ ಯಂತ್ರೋಪಕರಣಗಳ ಬಳಕೆ ಅತಿಯಾಗಿದೆ. ಆದರೆ, ಕಲಾಕೃತಿಗಳನ್ನು ಸಿದ್ಧಪಡಿಸಲು ಮನುಷ್ಯನ ಕೈಚಳಕದ ಮುಂದೆ ಬೇರಾವ ಯಂತ್ರೋಪಕರಣಗಳೂ ಸಾಟಿ ಆಗಲಾರವು. ಕುಸುರಿ ಕಲೆ ಸುಲಭದ್ದಲ್ಲ’ ಎಂದರು.
‘ಇಂದಿನ ಮಕ್ಕಳು ಆಟೋಟ, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಬಿಟ್ಟು ಮೊಬೈಲ್ ಫೋನ್ನಲ್ಲಿ ಮುಳುಗುತ್ತಿರುವುದು ಕಂಡುಬರುತ್ತಿದೆ. ಶಾಲಾ– ಕಾಲೇಜುಗಳು ಪಾಠಕ್ಕೆ ಸೀಮಿತಗೊಂಡಿದ್ದು, ಕಲೆ ಮತ್ತು ಸಂಸ್ಕೃತಿ ಮೂಲಕ ಕಲಿಸುವಂತಾಗಬೇಕು. ಆ ಮೂಲಕ ನಮ್ಮ ಕಲೆ– ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು’ ಎಂದು ಆಶಿಸಿದರು.
ಶಿಲ್ಪಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವೆಂಕಟಾಚಲಪತಿ, ಲಲಿತಕಲೆ ಉಪ ಸಮಿತಿ ಅಧ್ಯಕ್ಷ ರಘುರಾಮರಾಜೇ ಅರಸ್, ಉಪಾಧ್ಯಕ್ಷರಾದ ಭಾಸ್ಕರ್, ಬಸವರಾಜ್, ರಾಜೇಶ್, ಕಾವಾ ಡೀನ್ ಎ.ದೇವರಾಜು, ಆಡಳಿತಾಧಿಕಾರಿ ನಿರ್ಮಲಾ ಎಸ್. ಮಠಪತಿ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜು ಪ್ರಸಾದ್, ಕಾರ್ಯದರ್ಶಿ ಸೂರ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.