ಮೈಸೂರು: ಇಲ್ಲಿನ ಪ್ರಾಕೃತಿಕ ಪ್ರಾದೇಶಿಕ ವಸ್ತುಸಂಗ್ರಹಾಲಯ (ಆರ್ಎಂಎನ್ಎಚ್)ದಲ್ಲಿ ಮಂಗಳವಾರ ನಡೆದ ಸಂಸ್ಥಾಪನಾ ದಿನಾಚರಣೆಯ ಆಹ್ವಾನಪತ್ರಿಕೆಯಲ್ಲಿ ಕನ್ನಡ ಬಳಸದ ಹಾಗೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವೇ ಮುದ್ರಿಸಿದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಾಟಿ ಬೀಸಿದೆ. ಸ್ಪಷ್ಟೀಕರಣವನ್ನೂ ಕೇಳಿದೆ.
ಈ ಬಗ್ಗೆ ಪತ್ರ ಬರೆದಿರುವ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿದ್ದು, ಕೇಂದ್ರ ಸ್ವಾಮ್ಯದ ಯಾವುದೇ ಸಂಸ್ಥೆಗಳು ಕನ್ನಡಕ್ಕೆ ಮೊದಲ ಆದ್ಯತೆ ಕೊಡುವುದು ಕಡ್ಡಾಯವಾಗಿದೆ. ಸಂಸ್ಥೆಯು ಮುದ್ರಿಸಿರುವ ಆಹ್ವಾನಪತ್ರಿಕೆ ಗಮನಿಸಿದರೆ ಕನ್ನಡದ ಮೇಲಿರುವ ತಾತ್ಸಾರವು ರುಜುವಾತಾಗಿದೆ’ ಎಂದು ತಿಳಿಸಿದ್ದಾರೆ.
‘ಈ ರೀತಿಯ ಕನ್ನಡ ವಿರೋಧಿ ಧೋರಣೆಗೆ ಎಂಬ ಬಗ್ಗೆ ಸ್ಪಷ್ಟನೆ ಕೊಡಬೇಕು. ಮುಂದೆ ಇಂತಹ ಅಚಾತುರ್ಯಗಳಿಗೆ ಅವಕಾಶ ಕೊಡದೇ ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು’ ಎಂದು ಸೂಚಿಸಿದ್ದಾರೆ.
ಆರ್ಎಂಎನ್ಎಚ್ ಆಹ್ವಾನಪತ್ರಿಕೆಯಲ್ಲಿ ತ್ರಿಭಾಷಾ ಸೂತ್ರ ಪಾಲನೆಯಾಗದ ಬಗ್ಗೆ ಕನ್ನಡ ಹೋರಾಟಗಾರ ಅರವಿಂದ ಶರ್ಮ ಪ್ರಾಧಿಕಾರಕ್ಕೆ ದೂರರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.