ADVERTISEMENT

ಹಾಲು ಖರೀದಿ ದರ ಇಳಿಕೆ ನನ್ನ ಗಮನಕ್ಕೆ ತಂದಿಲ್ಲ: ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 11:39 IST
Last Updated 1 ಡಿಸೆಂಬರ್ 2023, 11:39 IST
   

ಮೈಸೂರು: ಕೆಲವು ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳು ರೈತರಿಂದ ಹಾಲು ಖರೀದಿ ದರ ಇಳಿಕೆ ಮಾಡಿರುವುದಕ್ಕೆ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೈಸೂರು ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಮಂಡ್ಯ (₹ 1.50), ಮೈಸೂರು (₹ 1.45) ಹಾಗೂ ಚಾಮರಾಜನಗರ (₹ 1) ಜಿಲ್ಲೆಗಳಲ್ಲಿ ಕಡಿತಗೊಳಿಸಲಾಗಿದೆ. ಬೇರೆ ಕಡೆಯೂ ಹೀಗೆ ಆಗಿರುವ ಮಾಹಿತಿ ಇದೆ. ಇದು ಸರಿಯಲ್ಲ’ ಎಂದು ಹೇಳಿದರು.

‘ದರ ಕಡಿತದ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ಮೈಸೂರಿನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ, ಕಡಿಮೆ ಮಾಡುವಂತೆ ಮುಖ್ಯಮಂತ್ರಿ ತಿಳಿಸಿಲ್ಲ. ಆದರೂ ಇಳಿಸಿದ್ದಾರೆ. ಹೀಗಾದರೆ ಹೇಗೆ?’ ಎಂದು ಕೇಳಿದರು.

ADVERTISEMENT

‘ದರ ಇಳಿಸದಂತೆ ಸಭೆಯಲ್ಲಿ ಸ್ಪಷ್ಟ ನಿರ್ದೇಶನ ನೀಡಿದ್ದರೂ ಉಲ್ಲಂಘಿಸಲಾಗಿದೆ. ಹೀಗಾಗಿ, ಅಂತಹ ಒಕ್ಕೂಟಗಳನ್ನು ಸೂಪರ್‌ಸೀಡ್ ಮಾಡಿ, ಇಲ್ಲದಿದ್ದರೆ ಅವರು ಬುದ್ಧಿ ಕಲಿಯುವುದಿಲ್ಲ’ ಎಂದು ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಂ ಅವರಿಗೆ ಸೂಚಿಸಿದರು. ‘ಒಕ್ಕೂಟಗಳನ್ನು ಸರಿದಾರಿಗೆ ತರಲು ಕಠಿಣ ಕ್ರಮ ಜರುಗಿಸಬೇಕು’ ಎಂದೂ ಹೇಳಿದರು.

‘ಒಕ್ಕೂಟದವರು ಏನು ಬೇಕಾದರೂ ಮಾಡಬಹುದು ಎಂಬಂತೆ ವರ್ತಿಸುತ್ತಿದ್ದಾರೆ. ದರ ಇಳಿಕೆಯನ್ನು ನಮ್ಮ ಗಮನಕ್ಕೆ ತಂದು ಹಾಗೂ ಅನುಮತಿ ಪಡೆದೇ ಮಾಡಬೇಕಾಗುತ್ತದೆ. ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕೊಡಬೇಕಾದವನು ನಾನು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.