ಡಾ.ಎಚ್.ಸಿ. ಮಹದೇವಪ್ಪ
ಮೈಸೂರು: ‘ದೇಶದಲ್ಲಿ ದೇವದೂತ ಬಂದ ನಂತರವೇ ಎಲ್ಲವೂ ದುಬಾರಿಯಾಗಿದೆ’ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
₹ 72 ಇದ್ದ ಲೀಟರ್ ಪೆಟ್ರೋಲ್ ಬೆಲೆ ₹ 100ಕ್ಕೆ, ₹ 60 ಇದ್ದ ಡೀಸೆಲ್ ₹ 85ಕ್ಕೆ ಏರಿಕೆಯಾಯಿತು. ಡಾಲರ್ ಎದುರು ರೂಪಾಯಿಯು ಮೌಲ್ಯ ಭಾರಿ ಕುಸಿತ ಕಂಡಿತು. ಅಡುಗೆ ಸಿಲಿಂಡರ್ ಬೆಲೆ ₹ 400 ಇದ್ದದ್ದು ₹1ಸಾವಿರಕ್ಕೆ ಏರಿಕೆ ಕಂಡಿತು. ಪುಲ್ವಾಮಾ ದಾಳಿ ನಡೆದು ಸೈನಿಕರು ಸಾವಿಗೀಡಾಗುವಂತಾಯಿತು. ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 55ರಿಂದ 102ನೇ ಸ್ಥಾನಕ್ಕೆ ಕುಸಿಯಿತು. ಜನಸಾಮಾನ್ಯರ ಕೊಳ್ಳುವ ಶಕ್ತಿಯೇ ಕ್ಷೀಣಿಸಿತು’ ಎಂದು ಆರೋಪಿಸಿದ್ದಾರೆ.
‘ಕೋವಿಡ್ ಸಂದರ್ಭದಲ್ಲಿ ಆಮ್ಲಜನಕ ದೊರೆಯದೇ ಲೆಕ್ಕವಿಲ್ಲದಷ್ಟು ಸಾವುಗಳಾದವು. ಚೀನಾವು ಗಡಿ ಪ್ರದೇಶದಲ್ಲಿ ಭಾರತವನ್ನು ಆಕ್ರಮಿಸಿ ತನ್ನ ಗ್ರಾಮಗಳನ್ನು ನಿರ್ಮಿಸಿತು. ಕೋಮು ದ್ವೇಷ ಹೆಚ್ಚಾಗಿ ಸಾಮರಸ್ಯದ ವಾತಾವರಣ ಹಾಳಾಯಿತು. ಬಾಬಾ ಸಾಹೇಬರು ರಚಿಸಿದ ಸಂವಿಧಾನಕ್ಕೆ ಅಪಾಯ ಬಂದೊದಗಿತು. ಜನರಿಗೆ ನ್ಯಾಯವಾಗಿಯೇ ನೀಡಬೇಕಿದ್ದ ಬರ ಪರಿಹಾರವನ್ನು ನ್ಯಾಯಾಲಯದ ಮೆಟ್ಟಿಲೇರಿ ಪಡೆದುಕೊಳ್ಳುವಂತೆ ಆಯಿತು. ಮಣಿಪುರದಂತಹ ರಾಜಕೀಯ ಅರಾಜಕತೆ ಮತ್ತು ಹಿಂಸೆಯು ಕಣ್ಣ ಮುಂದೆಯೇ ಜರುಗಿತು’ ಎಂದು ದೂರಿದ್ದಾರೆ.
‘ಯೋಜನೆಗಳ ಸಮೇತ ಇದ್ದ ದೇಶದ ಸಾಲವು ₹ 55 ಲಕ್ಷ ಕೋಟಿಗಳಿಂದ ಯೋಜನೆಗಳಿಲ್ಲದಂತೆ ₹ 185 ಲಕ್ಷ ಕೋಟಿಗೆ ಏರಿಕೆಯಾಯಿತು. ಕಾರ್ಪೊರೇಟ್ ಧಣಿಗಳು ಹೆಚ್ಚು ಶ್ರೀಮಂತರಾಗಿ, ಬಡವರು ಕಣ್ಣು ಬಾಯಿ ಬಿಡುವಂತೆ ಆಯಿತು. ದೇಶದ ಒಳಗಡೆ, ಅಜ್ಞಾನ, ಮೌಢ್ಯ, ಸಾಮಾಜಿಕ ಮತ್ತು ರಾಜಕೀಯ ಅಸಹನೆಯು ಹೆಚ್ಚಾಯಿತು. ಇಂತಹ ಅಪದ್ಧಗಳನ್ನು ಮಾಡುವುದಾಕ್ಕಾಗಿಯೇ ಆತ ದೇವದೂತನಾಗಿ ಬರಬೇಕಾಯಿತು ಎಂಬುದು ನಮ್ಮ ಕಾಲದ ಮಹಾ ದುರಂತಗಳಲ್ಲಿ ಒಂದು’ ಎಂದು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.