ADVERTISEMENT

ಪಿರಿಯಾಪಟ್ಟಣ: ಕಾರ್ಮಿಕರಿಗೆ ಕಿಟ್ ವಿತರಣೆ: ಅಂತರವೇ ಮಾಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 3:55 IST
Last Updated 14 ಜುಲೈ 2021, 3:55 IST
ಪಿರಿಯಾಪಟ್ಟಣದಲ್ಲಿ ಕಿಟ್ ಪಡೆಯಲು ಸಾವಿರಾರು ಕಾರ್ಮಿಕರು ಮಂಗಳವಾರ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು
ಪಿರಿಯಾಪಟ್ಟಣದಲ್ಲಿ ಕಿಟ್ ಪಡೆಯಲು ಸಾವಿರಾರು ಕಾರ್ಮಿಕರು ಮಂಗಳವಾರ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು   

ಪಿರಿಯಾಪಟ್ಟಣ: ಕಾರ್ಮಿಕ ಕಲ್ಯಾಣ ನಿಧಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಇಲ್ಲಿಯ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಮಂಗಳವಾರ ಆಹಾರ ಕಿಟ್‌ ವಿತರಿಸುತ್ತಿದ್ದಾಗ ಸಾವಿರಾರು ಜನರು ಏಕಕಾಲಕ್ಕೆ ಸೇರಿದ್ದರಿಂದ ಕನಿಷ್ಠ ಅಂತರವೂ ಮಾಯವಾಗಿತ್ತು.

ತಾಲ್ಲೂಕಿನಲ್ಲಿ 8,064 ಕಾರ್ಮಿಕರು ಕಿಟ್ ಪಡೆಯಲು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದ್ದಾರೆ. ಕಿಟ್‌ ನೀಡುವ ಕಾರ್ಯಕ್ಕೆ ಶಾಸಕ ಕೆ.ಮಹದೇವ್ ಸೋಮವಾರ ಚಾಲನೆ ನೀಡಿದ್ದಾರೆ. ಪ್ರತಿದಿನ 800 ಜನರಿಗೆ ಮಾತ್ರ ಟೋಕನ್ ವಿತರಿಸಿದರೂ, ಅವರೊಂದಿಗೆ ಇತರರು ಸೇರಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು. ಮಾಸ್ಕ್ ಕೂಡಾ ಬಹುತೇಕರು ಹಾಕಿರಲಿಲ್ಲ.

ಜನ ಸೇರಿದ್ದನ್ನು ನೋಡಿದ ಹಲವು ನಾಗರಿಕರು ‘ಇದು ಸೋಂಕು ಹರಡುವ ಭೀತಿ ಸೃಷ್ಟಿಸಿದೆ’ ಎಂದು ಆತಣಂಕ ವ್ಯಕ್ತಪಡಿಸಿದರು.

ADVERTISEMENT

ಕಾರ್ಮಿಕರಿಗೆ ಕಿಟ್ ವಿತರಿಸುವ ಜವಾಬ್ದಾರಿ ಹೊತ್ತಿರುವ ಇಲಾಖೆಯ ನೌಕರ ಭಾಸ್ಕರ್ ’ಪ್ರಜಾವಾಣಿ’ ಯೊಂದಿಗೆ ಮಾತನಾಡಿ, ‘ನಾವು ಎಷ್ಟೇ ವಿನಂತಿಸಿದರೂ ಕಾರ್ಮಿಕರು ನಮ್ಮ ಮಾತು ಕೇಳುತ್ತಿಲ್ಲ, ನೂಕುನುಗ್ಗಲು ಉಂಟು ಮಾಡುತ್ತಿದ್ದಾರೆ. ಪೊಲೀಸರು ಸಹ ಸ್ಥಳದಲ್ಲಿ ಇರುವುದಿಲ್ಲ ನಮಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.