ADVERTISEMENT

ಮೈಸೂರು: ಜಿಲ್ಲೆಯಲ್ಲಿ ಸಾರಿಗೆ ಬಸ್‌ಗಳ ಸಂಚಾರ ಹೆಚ್ಚಳ

ಗ್ರಾಮಾಂತರ ಘಟಕದಲ್ಲಿ ಶೇ 60, ನಗರ ಘಟಕದಲ್ಲಿ ಶೇ 80 ಸಿಬ್ಬಂದಿ ಕರ್ತವ್ಯಕ್ಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:06 IST
Last Updated 18 ಏಪ್ರಿಲ್ 2021, 4:06 IST
ಮೈಸೂರಿನ ಕೆಎಸ್ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಶುಕ್ರವಾರ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು
ಮೈಸೂರಿನ ಕೆಎಸ್ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಶುಕ್ರವಾರ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು   

ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಹೆಚ್ಚಾಗುತ್ತಿದ್ದು, ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿರುವ ಸಿಬ್ಬಂದಿಯ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ.

ಗ್ರಾಮಾಂತರ ಘಟಕದಲ್ಲಿ ಶನಿವಾರ ಶೇ 60ಕ್ಕೂ ಹೆಚ್ಚಿನ ಸಿಬ್ಬಂದಿ ಅಂದರೆ 1,200 ಮಂದಿ ಕರ್ತವ್ಯಕ್ಕೆ ಹಾಜರಾದರು. ನಗರ ಘಟಕದಲ್ಲಿ ಶೇ 80ಕ್ಕೂ ಅಧಿಕ ಎಂದರೆ, 1,200 ಮಂದಿ ಕೆಲಸಕ್ಕೆ ಹಾಜರಾದರು ಎಂದು ಎರಡೂ ವಿಭಾಗಗಳ ಸಂಚಾರ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

‘ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಹೆಚ್ಚುತ್ತಿದೆ. ಶನಿವಾರ ಒಂದೇ ದಿನ 1,200ಕ್ಕೂ ಅಧಿಕ ಸಿಬ್ಬಂದಿ ಕೆಲಸಕ್ಕೆ ಬಂದಿದ್ದಾರೆ’ ಎಂದು ಗ್ರಾಮಾಂತರ ಘಟಕದ ವಿಭಾಗೀಯ ನಿಯಂತ್ರಣಾ ಧಿಕಾರಿ ಶ್ರೀನಿವಾಸ್ ಹೇಳಿದರು.

ADVERTISEMENT

‘ನಗರ ಘಟಕದಲ್ಲಿ 316 ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದವು’ ಎಂದು ನಗರ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಪಿ.ನಾಗರಾಜ್‌ ತಿಳಿಸಿದರು.

ಗ್ರಾಮಾಂತರ ಘಟಕದಿಂದ ಹೊರಬಿದ್ದ 580 ಬಸ್‌ಗಳ ಪೈಕಿ 350 ಕೆಎಸ್‌ಆರ್‌ಟಿಸಿ ಬಸ್‌ಗಳೇ ಇದ್ದವು. ಉಳಿದ 230 ಬಸ್‌ಗಳು ಖಾಸಗಿ ಸಂಸ್ಥೆಯವರಿಗೆ ಸೇರಿದ್ದವರು.

ಕೋವಿಡ್ ಪರೀಕ್ಷೆ: ಒಂದು ವಾರದಿಂದ ಕರ್ತವ್ಯಕ್ಕೆ ಗೈರಾಗಿ ಹೊಸದಾಗಿ ಕರ್ತವ್ಯಕ್ಕೆ ಬರುವ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳ ಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಒಂದು ಕಡೆ ಕಲ್ಲೆಸೆತ: ಈ ಮಧ್ಯೆ ಗ್ರಾಮಾಂತರ ಘಟಕದಿಂದ ಹೊರಟಿದ್ದ ಒಂದು ಕೆಎಸ್‌ಆರ್‌ಟಿಸಿ ಬಸ್‌ಗೆ ದುಷ್ಕರ್ಮಿಗಳು ಶುಕ್ರವಾರ ತಡರಾತ್ರಿ ಕಲ್ಲೆಸೆದಿದ್ದಾರೆ. ಇದರಿಂದ ಬಸ್‌ನ ಗಾಜುಗಳು ಪುಡಿಪುಡಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.