ADVERTISEMENT

ಶೌಚಾಲಯ ತೆರೆಯಲು ಸೂಚನೆ

ಕುಕ್ಕರಹಳ್ಳಿ ಕೆರೆ ಅಂಗಳದಲ್ಲಿ ವಾಯುವಿಹಾರ ನಡೆಸಿದ ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:34 IST
Last Updated 8 ಸೆಪ್ಟೆಂಬರ್ 2019, 20:34 IST
ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನುವಾರ ಸಚಿವ ವಿ.ಸೋಮಣ್ಣ ವಾಯುವಿಹಾರ ನಡೆಸಿದರು. ಸಂಸದ ಪ್ರತಾಪಸಿಂಹ ಇದ್ದಾರೆ
ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನುವಾರ ಸಚಿವ ವಿ.ಸೋಮಣ್ಣ ವಾಯುವಿಹಾರ ನಡೆಸಿದರು. ಸಂಸದ ಪ್ರತಾಪಸಿಂಹ ಇದ್ದಾರೆ   

ಮೈಸೂರು: ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೀಗ ಹಾಕಲಾಗಿದ್ದ ಶೌಚಾಲಯಗಳನ್ನು ತೆರೆಯಬೇಕು ಎಂದು ಸಚಿವ ಸೋಮಣ್ಣ ಅವರು ಮೈಸೂರು ವಿಶ್ವವಿದ್ಯಾನಿಲಯದ ಎಂಜಿನಿಯರ್ ಶಿವಲಿಂಗಪ್ಪ ಅವರಿಗೆ ಸೂಚನೆ ನೀಡಿದರು.

ಇಲ್ಲಿ ಭಾನುವಾರ ಅವರು ವಾಯುವಿಹಾರದ ಸಂದರ್ಭದಲ್ಲಿ ಕೆರೆಯ ಪರಿಸ್ಥಿತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಕೆರೆ ಅಂಗಳಕ್ಕೆ ನೂರಾರು ಮಂದಿ ವಾಯುವಿಹಾರಿಗಳು ಬರುತ್ತಾರೆ. ಇವರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಇರುವ ಶೌಚಾಲಯವನ್ನೂ ಬಾಗಿಲು ಹಾಕಲಾಗಿದೆ. ಇದು ಸರಿಯಲ್ಲ. ಮುಂದಿನ ಬುಧವಾರ ಇಲ್ಲವೇ ಗುರುವಾರ ಬರುವೆ. ಅಷ್ಟರಲ್ಲಿ ಶೌಚಾಲಯ ತೆರೆದಿರಬೇಕು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿಯ ‘ಮತ್ಸ್ಯ ದರ್ಶಿನಿ’ ಮಳಿಗೆಯಲ್ಲಿ ಹಸಿ ಮೀನು ಮಾರಾಟಕ್ಕೆ ಮಾತ್ರ ಅವಕಾಶವಿದೆ. ಆದರೆ, ಮೀನಿನ ಸಿದ್ಧ ಆಹಾರ ಪದಾರ್ಥಗಳ ಮಾರಾಟಕ್ಕೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಲುಷಿತ ನೀರು ಕೆರೆಗೆ ಸೇರುವುದನ್ನು ತಪ್ಪಿಸಲು ಯೋಜನೆ ರೂಪಿಸಲಾಗುವುದು. ಕನಿಷ್ಠ 15 ದಿನಗಳಿಗೆ ಒಮ್ಮೆಯಾದರೂ ಇಲ್ಲಿಗೆ ಬಂದು ಪರಿಶೀಲನೆ ನಡೆಸುತ್ತೇನೆ ಎಂದು ಅವರು ಹೇಳಿದರು.

ವಾಯುವಿಹಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು ಕುಂದುಕೊರತೆಗಳನ್ನು ಆಲಿಸಿದರು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 81ನೇ ಜನ್ಮದಿನದ ಅಂಗವಾಗಿ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಅಭಿರುಚಿ ಪ್ರಕಾಶನದಿಂದ ನಡೆಯುತ್ತಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಸಂಘದ ಯುವ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಅವರ ಕುಶಲೋಪರಿ ವಿಚಾರಿಸಿದರು.

ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಬಿಜೆಪಿ ಮುಖಂಡರಾದ ಎಚ್.ವಿ.ರಾಜೀವ, ಬಿ.ಪಿ.ಮಂಜುನಾಥ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಮೈಸೂರು ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.