ಮೈಸೂರಿನಲ್ಲಿ ನಡೆದ ಕುವೆಂಪು ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಟಿ.ತಿಮ್ಮೇಗೌಡ, ಸಿ.ಪಿ.ಕೃಷ್ಣಕುಮಾರ್, ಎನ್.ಗೋಪಾಲಗೌಡ, ಕೆ.ಚಿದಾನಂದಗೌಡ, ಎಂ.ಕೆ.ವೆಂಕಟರಾಮು ಅವರಿಗೆ ಕುವೆಂಪು ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು: ‘ಯಾವುದೇ ಕ್ಷೇತ್ರದಲ್ಲಿ ಸಾಧನೆಗೆ ನಿರಂತರ ಪ್ರಯತ್ನ ಬಹಳ ಮುಖ್ಯ’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿ ಶುಕ್ರವಾರ ನಡೆದ ಕುವೆಂಪು ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬರೂ ಸಮಾಜ ಸೇವೆಯಲ್ಲಿ ತೊಡಗಬೇಕು’ ಎಂದರು.
ಸುಪ್ರಿಂಕೋರ್ಟ್ ನಿವೃತ್ತ ನಾಯಾಧೀಶ ಎನ್.ಗೋಪಾಲಗೌಡ ಮಾತನಾಡಿ, ‘ಪ್ರತಿಯೊಬ್ಬರೂ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಇದು ವಿಚಾರವನ್ನು ವಿವೇಚನೆಯಿಂದ ಅಭ್ಯಸಿಸುವುದರಿಂದ ಮೂಡುತ್ತದೆ. ಕುವೆಂಪು ವಿಶ್ವಮಾನವ ಸಂದೇಶ ಸಾರಿದ್ದಾರೆ. ಅವರ ಕಾವ್ಯ ಶೈಲಿ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಮೆರುಗು ನೀಡಿದೆ’ ಎಂದು ಹೇಳಿದರು.
ಗೋವಿಂದೇಗೌಡ, ಬಿ.ಕೆ.ಚಂದ್ರಶೇಖರಗೌಡ, ಮೆಲ್ಲಹಳ್ಳಿ ಬೋರೇಗೌಡ, ಎನ್.ಜಿ.ನಾರಾಯಣ (ಸಮಾಜ ಸೇವಾ ಪ್ರಶಸ್ತಿ), ಡಾ.ಅರುಣ್ ಶ್ರೀನಿವಾಸ್, ಡಾ.ಎಸ್.ಪಿ.ಯೋಗಣ್ಣ, ಡಾ.ಸರಳಾ ಚಂದ್ರಶೇಖರ್, ಡಾ.ಶುಶ್ರುತ್ಗೌಡ (ಬಾಲಗಂಗಾಧರನಾಥ ಸ್ವಾಮೀಜಿ ವೈದ್ಯರತ್ನ ಪ್ರಶಸ್ತಿ) ಪ್ರದಾನ ಮಾಡಲಾಯಿತು.
ಎಸ್ಎಸ್ಎಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕೆಂಪೀರೇಗೌಡ ಸ್ಮರಣಾರ್ಥ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು.
ಟ್ರಸ್ಟ್ ಅಧ್ಯಕ್ಷ ಎಚ್.ಕೆ.ರಾಮು ಮಾತನಾಡಿದರು. ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಇದ್ದರು.
ರಾಷ್ಟ್ರಕವಿ ಕುವೆಂಪುಗೆ ಮರಣೋತ್ತರವಾಗಿ ‘ಭಾರತ ರತ್ನ’ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಸೆಳೆಯಲಾಗುವುದು
- ಜಿ.ಟಿ. ದೇವೇಗೌಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.