ADVERTISEMENT

ಕಾರ್ಮಿಕ ವರ್ಗಕ್ಕೆ ‘ನೀಮ್‌’ ಗಂಡಾಂತರ

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಸಿಐಟಿಯು 9ನೇ ಸಮ್ಮೇಳನದಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 5:37 IST
Last Updated 18 ಆಗಸ್ಟ್ 2019, 5:37 IST
ಸಿಐಟಿಯುನ ಮೈಸೂರು ಜಿಲ್ಲೆಯ 9ನೇ ಸಮ್ಮೇಳನದ ಪ್ರಯುಕ್ತ ಸಂಘಟನೆಯ ಕಾರ್ಯಕರ್ತರು ಶನಿವಾರ ಮೈಸೂರಿನಲ್ಲಿ ಮೆರವಣಿಗೆ ನಡೆಸಿದರು
ಸಿಐಟಿಯುನ ಮೈಸೂರು ಜಿಲ್ಲೆಯ 9ನೇ ಸಮ್ಮೇಳನದ ಪ್ರಯುಕ್ತ ಸಂಘಟನೆಯ ಕಾರ್ಯಕರ್ತರು ಶನಿವಾರ ಮೈಸೂರಿನಲ್ಲಿ ಮೆರವಣಿಗೆ ನಡೆಸಿದರು   

ಮೈಸೂರು: ಪಾಕಿಸ್ತಾನದಿಂದ ಬಾಂಬ್ ಬೀಳುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ದೇಶದಲ್ಲಿ ‘ನೀಮ್‌’ ಎಂಬ ‘ನಿಶ್ಯಬ್ದ ಬಾಂಬ್’ ಹಾಕಲಾಗಿದೆ. ಇದು ಯಾರ ಅರಿವಿಗೂ ಬರುತ್ತಿಲ್ಲ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಮ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ನಂಜರಾಜಬಹದ್ದೂರ್ ಛತ್ರದಲ್ಲಿ ಶನಿವಾರ ಸಿಐಟಿಯು 9ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾಷನಲ್ ಎಂಪ್ಲಾಯಿಮೆಂಟ್ ಎನಾನ್ಸ್‌ಮೆಂಟ್ ಮಿಷನ್’ (ನೀಮ್) ಹೆಸರಿನ ಈ ಯೋಜನೆಯು ದೇಶದ ಕಾರ್ಮಿಕ ವರ್ಗವನ್ನೇ ಅಪಮಾನಗೊಳಿಸಿದೆ ಎಂದು ಕಿಡಿಕಾರಿದರು.

ADVERTISEMENT

ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ವ್ಯಕ್ತಿ ಉದ್ಯೋಗಕ್ಕೆ ಅರ್ಹ ಅಲ್ಲ. ಆತ 3 ವರ್ಷಗಳ ಕಾಲ ಈ ‘ನೀಮ್‌’ ಯೋಜನೆಯಡಿ ‘ಟ್ರೈನಿ’ ಆಗಿ ತೀರಾ ಕನಿಷ್ಠ ಸಂಬಳಕ್ಕೆ ದುಡಿಯಬೇಕು. ನಂತರವಷ್ಟೇ ಆತ ಉದ್ಯೋಗಕ್ಕೆ ಅರ್ಹನಾಗುತ್ತಾನೆ. ಇದು ಕಾರ್ಮಿಕರಿಗೆ ಗಂಡಾಂತರಕಾರಿಯಾಗಿದೆ ಎಂದರು.

ಎಲ್ಲ ಕಂಪನಿಗಳೂ ಈ ‘ನೀಮ್ ಟ್ರೈನಿ’ಗಳ ಮೊರೆ ಹೊಕ್ಕರೆ ಕಾರ್ಮಿಕರ ಸ್ಥಿತಿ ಏನಾಗಬೇಕು. ಅವರ ಜೀವನಮಟ್ಟ ಅಭಿವೃದ್ಧಿಯಾಗುವುದಿರಲಿ ಮತ್ತಷ್ಟು ಕುಸಿತ ಕಾಣುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರವು ರೈಲ್ವೆ, ಎಚ್ಎಎಲ್, ಬಿಎಸ್‌ಎನ್‌ಎಲ್‌, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಬೆಮಲ್ ಹೀಗೆ ಅಧಿಕ ಉದ್ಯೋಗ ಸೃಷ್ಟಿಸುವ ಇಲಾಖೆ, ಕೈಗಾರಿಕೆ, ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.

ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್.ಉಮೇಶ್, ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಬಾಲಾಜಿರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ, ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎಸ್.ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಕೆ.ಬಸವರಾಜು, ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.