
ಕೆ.ಆರ್.ನಗರ: ಕಾವೇರಿ ಹಿನ್ನೀರಿನಿಂದ ಮುಳುಗಡೆಯಾಗುತ್ತಿರುವ, ಆರ್ಟಿಸಿ ಇರುವ ಜಮೀನು ಮಾಲೀಕರಿಗೆ ಸರ್ಕಾರದಿಂದ ಶಾಶ್ವತ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.
ತಾಲ್ಲೂಕಿನ ಸನ್ಯಾಸಿಪುರ ಗ್ರಾಮದಲ್ಲಿ ₹5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಚೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಕಾವೇರಿ ಹಿನ್ನೀರಿನಿಂದ ಮುಳುಗಡೆಯಾಗುತ್ತಿರುವ ಜಮೀನು ಮಾಲೀಕರು ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು’ ಎಂದು ಮನವಿ ಮಾಡಿದರು.
‘ಸನ್ಯಾಸಿಪುರ ಗ್ರಾಮದಲ್ಲಿ ಗ್ರಾಮದಲ್ಲಿ ಸಾಕಷ್ಟು ಜನ ವಿದ್ಯಾವಂತರಿದ್ದಾರೆ, ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಅನಕೂಲಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಿ ಡಿಜಿಟಲ್ ಗ್ರಂಥಾಲಯ ತೆರೆಯಲಾಗುತ್ತದೆ’ ಎಂದು ಭರವಸೆ ನೀಡಿದರು.
ಸನ್ಯಾಸಿಪುರ ಗ್ರಾಮದ ಬಳಿ ಹಳೇ ಸೇತುವೆ ಶಿಥಿಲಗೊಂಡಿದ್ದು, ಯಾವಾಗ ಬೇಕಾದರೂ ನೆಲಕಚ್ಚಬಹುದು. ಹಳೇ ಸೇತುವೆ ಮೇಲೆ ಬಸ್ ಮತ್ತು ಭಾರೀ ವಾಹನಗಳು ಓಡಾಡದಂತೆ ಕ್ರಮ ವಹಿಸಲಾಗುತ್ತದೆ. ಗ್ರಾಮದಲ್ಲಿ ಈಗಿರುವ ಸ್ಮಶಾನದಲ್ಲಿ ನೀರು ತುಂಬಿಕೊಳ್ಳುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಶಾಶ್ವತವಾದ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ, ಜೊತೆಗೆ ಗ್ರಾಮದಲ್ಲಿ ಕೆಟ್ಟು ನಿಂತಿರುವ ಮತ್ತು ಹೊಸದಾಗಿ ಬೀದಿ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.
‘ಹಾಸನ-ಮೈಸೂರು ರಸ್ತೆಯಿಂದ ಸನ್ಯಾಸಿಪುರ ಮಾರ್ಗವಾಗಿ ತಿಪ್ಪೂರು, ದೆಗ್ಗನಹಳ್ಳಿವರೆಗೆ ₹5 ಕೋಟಿ ಮೊತ್ತದ 2 ಕಿ.ಮೀ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತದೆ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾನಾರಾಯಣ, ಸದಸ್ಯರಾದ ಗೌರಮ್ಮ, ಎಚ್.ಡಿ.ನಾಗೇಶ್, ಎಚ್.ಈ.ಮಹದೇವಕುಮಾರ್, ರೇವಣ್ಣ, ಹರಿರಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಚ್.ಪಿ.ಪ್ರಶಾಂತ್, ನಿರ್ದೇಶಕ ಎಂ.ಎಸ್.ಅನಂತು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸಯ್ಯದ್ ಜಾಬೀರ್, ಮುಖಂಡರಾದ ಕಲ್ಲಹಳ್ಳಿ ಶ್ರೀನಿವಾಸ್, ಬಿ.ಮಂಜುರಾಜ್, ರಾಮಚಂದ್ರ, ಶಿವಣ್ಣ, ರೇವಣ್ಣ, ಪಿಡಬ್ಲ್ಯೂಡಿ ಎಇಇ ಸುಮಿತ್ರಾ, ಎಇ ಜಿ.ಕೆ.ಸಿದ್ದೇಶ್ವರಪ್ರಸಾದ್, ಅಶೋಕ್ ರೆಡ್ಡಿ, ಪಿಡಿಒ ಅಶ್ವಿನಿ ಭಾಗವಹಿಸಿದ್ದರು.
ಹಾಸನ-ಮೈಸೂರು ರಸ್ತೆಯಿಂದ ಸನ್ಯಾಸಿಪುರ ಮಾರ್ಗವಾಗಿ ತಿಪ್ಪೂರು, ದೆಗ್ಗನಹಳ್ಳಿವರೆಗೆ ₹5 ಕೋಟಿ ಮೊತ್ತದ 2 ಕಿ.ಮೀ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತದೆಡಿ.ರವಿಶಂಕರ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.