ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಚಿರತೆಯೊಂದು ಉರುಳಿಗೆ ಬಲಿಯಾಗಿದೆ.
ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಇದು ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಮನೆಯೊಂದಕ್ಕೆ ಶುಕ್ರವಾರ ನುಗ್ಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು, ಚಾಮರಾಜೇಂದ್ರ ಮೃಗಾಲಯಕ್ಕೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದೆ.
ಇದರ ಕುತ್ತಿಗೆಯಲ್ಲಿದ್ದ ಉರುಳನ್ನು ಕತ್ತರಿಸಿ ರಕ್ಷಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ ಎಂದು ಪಶುವೈದ್ಯ ಡಾ.ನಾಗರಾಜು ತಿಳಿಸಿದರು.
ಗ್ರಾಮದ ನಿಂಗಣ್ಣಸ್ವಾಮಿ ಎಂಬುವವರಿಗೆ ಸೇರಿದ ಮನೆಗೆ 2ರಿಂದ 3 ವರ್ಷದ ಹೆಣ್ಣು ಚಿರತೆಯು ನುಗ್ಗಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಇದನ್ನು ಕೂಡಿಹಾಕುವ ವೇಳೆ ಆನಂದಮೂರ್ತಿ ಮತ್ತು ದಾಸಪ್ಪ ಎಂಬುವವರಿಗೆ ಚಿರತೆ ಪರಚಿ ಗಾಯಗಳಿಸಿದೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದರು.
ಇದರ ಕುತ್ತಿಗೆಗೆ ಉರುಳು ಬಿಗಿದುಕೊಂಡು ಗಾಯವಾಗಿ ಕೀವು ತುಂಬಿಕೊಂಡಿತ್ತು. ಇದರಲ್ಲಿ ಹುಳುಗಳು ಉಂಟಾಗಿದ್ದು, ಆಹಾರ ಸೇವಿಸದ ಸ್ಥಿತಿಗೆ ಚಿರತೆ ತಲುಪಿದೆ. ದೇಹದಲ್ಲಿ ಸ್ನಾಯುಗಳು ಬಲಹೀನವಾಗಿದ್ದವು. ಸೆರೆ ಹಿಡಿದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಚಾಮರಾಜೇಂದ್ರ ಮೃಗಾಲಯಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸುವ ವೇಳೆ ಸಾವನ್ನಪ್ಪಿದೆ.
ಚಿರತೆ ಎಷ್ಟು ನಿತ್ರಾಣವಾಗಿತ್ತು ಎಂದರೆ ಅದು ಕುರಿಗಳ ಮಧ್ಯೆ ಇದ್ದರೂ ಕುರಿಯನ್ನು ತಿನ್ನಲು ಯತ್ನಿಸಿರಲಿಲ್ಲ. ಮೊದಲೇ ಆಹಾರ ಇಲ್ಲದೇ ಸೊರಗಿದ್ದ ಚಿರತೆಯು ಮನೆ ಸೇರಿದ ನಂತರ ಮತ್ತಷ್ಟು ಭೀತಿಗೆ ಒಳಗಾಯಿತು. ಇದರಿಂದ ಅದು ಕುರಿ, ಮೇಕೆಗಳ ದಾಳಿ ನಡೆಸಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.