ADVERTISEMENT

ಮೈಸೂರು: ಕಣ್ಮನ ಸೆಳೆಯುವ ಲಿಂಗಾಂಬುಧಿ ‘ಸಸ್ಯವನ’

26ರಂದು ಲೋಕಾರ್ಪಣೆ; ಚಿಟ್ಟೆಪಾರ್ಕ್‌ ಆಕರ್ಷಣೆ

ಬಾಲಚಂದ್ರ
Published 23 ಸೆಪ್ಟೆಂಬರ್ 2022, 19:30 IST
Last Updated 23 ಸೆಪ್ಟೆಂಬರ್ 2022, 19:30 IST
ಲಿಂಗಾಂಬುಧಿ ಸಸ್ಯಕ್ಷೇತ್ರದ ಪ್ರವೇಶದ್ವಾರ ನಾಮಫಲಕ ಅಳವಡಿಸುವ ಕಾರ್ಯದಲ್ಲಿ ನಿರತರಾದ ಸಿಬ್ಬಂದಿ
ಲಿಂಗಾಂಬುಧಿ ಸಸ್ಯಕ್ಷೇತ್ರದ ಪ್ರವೇಶದ್ವಾರ ನಾಮಫಲಕ ಅಳವಡಿಸುವ ಕಾರ್ಯದಲ್ಲಿ ನಿರತರಾದ ಸಿಬ್ಬಂದಿ   

ಮೈಸೂರು: ಪ್ರವಾಸಿಗರ ನೆಚ್ಚಿನ ತಾಣವಾದ ಮೈಸೂರಿಗೆ ಮತ್ತೊಂದು ಪ್ರೇಕ್ಷಣೀಯ ಸ್ಥಳವೊಂದು ಆಕರ್ಷಣೆಗೆ ಸಿದ್ಧವಾಗಿದೆ. ನಗರದ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಲಿಂಗಾಂಬುಧಿ ಕೆರೆ ಆವರಣದಲ್ಲಿ ಅತ್ಯಂತ ದೊಡ್ಡದಾದ ಸಸ್ಯಕಾಶಿ, ಚಿಟ್ಟೆ ಉದ್ಯಾನ ಉದ್ಘಾಟನೆಗೆ ಸಜ್ಜಾಗಿದೆ. ತೋಟಗಾರಿಕಾ ಸಚಿವ ಮುನಿರತ್ನ ಸೆ.26ರಂದು ಲೋಕಾರ್ಪಣೆ ಮಾಡಲಿದ್ದಾರೆ.

‘₹4 ಕೋಟಿ ವೆಚ್ಚ, ಸುಮಾರು 15 ಎಕರೆ ವ್ಯಾಪ್ತಿಯಲ್ಲಿ ಬಟಾನಿಕಲ್‌ ಗಾರ್ಡನ್‌ (ಸಸ್ಯಕ್ಷೇತ್ರ) ನಿರ್ಮಾಣ ಮಾಡಲಾಗಿದೆ. ಇದರಲ್ಲಿ 350 ತಳಿಯ ವಿವಿಧ ಸಸ್ಯಗಳಿದ್ದು, ದೇಶ–ವಿದೇಶದ ಗಿಡಗಳು ಇದರಲ್ಲಿ ಒಳಗೊಂಡಿದೆ’ ಎಂದು ಮೈಸೂರು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರುದ್ರೇಶ್‌ ಕೆ. ಮಾಹಿತಿ ನೀಡಿದರು.

ಮಾಹಿತಿ ಕಣಜ: 25ಕ್ಕೂ ಹೆಚ್ಚು ಫಿಕಸ್‌ ಮರಗಳು, ಔಷಧೀಯ, ಸುಗಂಧ ಸಸ್ಯವನ, ಗುಲಾಬಿ, ಟೋಪಿಯರಿ, ಬಿದಿರಿನ ಬ್ಲಾಕ್‌, ಕಾಡಿನ ಬಂಡೆಗಳಿಂದ ನಿರ್ಮಿಸಿದ ರಾಕರಿ, ಪಾಲ್ಮಾಟಮ್‌, ಹಣ್ಣಿನ ಮರಗಳು, ಸ್ಥಳೀಯ ಪ್ರಭೇದದ 25ಕ್ಕೂ ಅಧಿಕ ಸಸ್ಯಗಳಿವೆ. ಸಸ್ಯ ಕ್ಷೇತ್ರದಲ್ಲಿನ ಪ್ರತಿ ಸಸಿಯ ಮುಂದೆಯೂ ಇಂಗ್ಲಿಷ್, ಕನ್ನಡ ಭಾಷೆಯಲ್ಲಿ ಅದರ ಹೆಸರು ಸೂಚಿಸುವ ನಾಮಫಲಕ ಅಳವಡಿಸಲಾಗಿದ್ದು, ಅದರ ವೈಜ್ಞಾನಿಕ ಹೆಸರುಗಳನ್ನೂ ತಿಳಿದುಕೊಳ್ಳಬಹುದು. ಅದರಲ್ಲೂ ಸಸ್ಯವಿಜ್ಞಾನದ ಆಸಕ್ತಿಯುಳ್ಳವರಿಗೆ ಅತೀ ದೊಡ್ಡ ಮಾಹಿತಿ ಕಣಜದಂತಿದೆ. ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮಾಹಿತಿ ಜೊತೆಗೆ ಮುದ ನೀಡಲಿದೆ. ಇದಲ್ಲದೇ, ವಿವಿಧ ಸಸ್ಯಗಳಿಂದ ಆನೆ, ಬಾತುಕೋಳಿ, ಮನುಷ್ಯನ ವಿವಿಧ ಕಲಾಕೃತಿಗಳು ಕೈಬೀಸಿ ಕರೆಯುತ್ತಿದೆ.

ADVERTISEMENT

ಚಿಟ್ಟೆ ಪಾರ್ಕ್‌: ‘ವಿವಿಧ ಪ್ರಭೇದದ ಸಸ್ಯಗಳು ಈಗಾಗಲೇ ಆಳೆತ್ತರಕ್ಕೆ ಬೆಳೆದು ನಿಂತಿದ್ದು, ಹೂವಿನ ಗಿಡಗಳು ನಳನಳಿಸುತ್ತಿವೆ. ಪಕ್ಷಿಗಳ ಜೊತೆಗೆ ಚಿಟ್ಟೆಗಳಿಗೂ ಆವಾಸ ಸ್ಥಾನವಾಗಲಿದೆ. ಇದನ್ನು ಮನಗಂಡು, ಚಿಟ್ಟೆ ಉದ್ಯಾನ ಕೂಡ ನಿರ್ಮಿಸಲಾಗಿದ್ದು, ವಿವಿಧ ನಮೂನೆಯ ಚಿಟ್ಟೆಗಳ ಆವಾಸ ಸ್ಥಾನವಾಗಲಿದೆ’ ಎಂದು ರುದ್ರೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲಿದೆ..? ರಾಮಕೃಷ್ಣ ನಗರದ ಎಚ್‌. ಬ್ಲಾಕ್‌ನಲ್ಲಿರುವ ಲಿಂಗಾಂಬುಧಿ ಕೆರೆ ದಂಡೆಯ ಉತ್ತರ, ಪೂರ್ವ ದಿಕ್ಕಿನಲ್ಲಿ ಈ ಉದ್ಯಾನವಿದೆ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.