ADVERTISEMENT

ಮೈಸೂರು: ಕಪಿಲಾ ನದಿಯಲ್ಲಿ ನಡೆದುಕೊಂಡೇ ನುಸುಳುವ ಮದ್ಯಪ್ರಿಯರು!

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 14:49 IST
Last Updated 1 ಜೂನ್ 2020, 14:49 IST
ಕಪಿಲಾ ನದಿ ದಾಟಿಕೊಂಡು ಹೋಗುತ್ತಿರುವ ವ್ಯಕ್ತಿ
ಕಪಿಲಾ ನದಿ ದಾಟಿಕೊಂಡು ಹೋಗುತ್ತಿರುವ ವ್ಯಕ್ತಿ   

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕಪಿಲಾ ನದಿಯಲ್ಲಿ ಬೇಸಿಗೆಯಿಂದಾಗಿ ನೀರು ಕಡಿಮೆಯಾಗಿದ್ದು, ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ಕೇರಳದಿಂದ ನೂರಾರು ಸಂಖ್ಯೆಯಲ್ಲಿ ಮದ್ಯಪ್ರಿಯರು ನದಿಯಲ್ಲೇ ನಡೆದುಕೊಂಡೇ ಬರುತ್ತಿರುವುದು ಆತಂಕ ಮೂಡಿಸಿದೆ.

ಇವರಿಂದ ಕೊರೊನಾ ಸೋಂಕು ಹರಡುವ ಭೀತಿ ಇದ್ದರೆ, ಮತ್ತೊಂದಡೆ ಕೇರಳಕ್ಕೆ ಮಾನ್ಸೂನ್‌ ಮಾರುತಗಳು ಪ್ರವೇಶಿಸಿರುವುದರಿಂದ ಯಾವುದೇ ಕ್ಷಣದಲ್ಲಿ ಭಾರಿ ಮಳೆಯಾಗಿ ನದಿಯ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಮದ್ಯಕ್ಕಾಗಿ ದಾಟಿ ಬರುವವರು ಕೊಚ್ಚಿ ಹೋಗುವ ಸಾಧ್ಯತೆಯೇ ಅಧಿಕವಾಗಿದೆ.

ಸಂಜೆಯ ನಂತರ ರಾಜ್ಯದ ಡಿ.ಬಿ.ಕುಪ್ಪೆಗೆ ನದಿಯಲ್ಲಿನ ಬಂಡೆ ಕಲ್ಲುಗಳ ಮಾರ್ಗವಾಗಿ ನಡೆದುಕೊಂಡು ಬರುವ ನುಸುಳುಕೋರರು ರಾಜ್ಯದಲ್ಲಿ ಮದ್ಯ ಖರೀದಿಸಿ ಮತ್ತೆ ವಾಪಸ್ ಅದೇ ಮಾರ್ಗದ ಮೂಲಕ ಕೇರಳಕ್ಕೆ ವಾಪಸ್ಸಾಗುತ್ತಿದ್ದಾರೆ.

ADVERTISEMENT

‘ಇದರಿಂದ ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಈಗಾಗಲೇ ಡಿ.ಬಿ.ಕುಪ್ಪೆಯಲ್ಲಿದ್ದ ಮದ್ಯದಂಗಡಿಯನ್ನು ಮುಚ್ಚಲಾಗಿದೆ. ನುಸುಳುಕೋರರು ಇದೀಗ ಇಲ್ಲಿಗೆ ಸಮೀಪದ ಕಾರಾಪುರದಲ್ಲಿರುವ ಮದ್ಯದಂಗಡಿಗೆ ತೆರಳಿ ಖರೀದಿಸಿ ವಾಪಸ್ ಕೇರಳಕ್ಕೆ ತೆರಳುತ್ತಿದ್ದಾರೆ’ ಎಂದು ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿರುಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ವೀಣಾ, ‘ನುಸುಳುಕೋರರನ್ನು ತಡೆಯಲು ಪೊಲೀಸ್ ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿದೆ. ಸ್ಥಳೀಯ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿದೆ. ಸದ್ಯ, ಇಂತಹ ಪ್ರಕರಣಗಳು ವರದಿಯಾಗಿಲ್ಲ’ ಎಂದು ತಿಳಿಸಿದರು.

ಮದ್ಯದಂಗಡಿಗಳು ಮುಚ್ಚಿದ್ದರೂ ಕೆಲವರು ಮೊಬೈಲ್ ಮೂಲಕ ಸಂಪರ್ಕಿಸಿ ನದಿ ತೀರಕ್ಕೆ ಮದ್ಯದ ಬಾಟಲಿಗಳನ್ನು ತಂದು ಮೂರುಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.