ಮೈಸೂರು: ಇಲ್ಲಿನ ಉದಯಗಿರಿಯಲ್ಲಿ ಲಾಕ್ಡೌನ್ ಜಾರಿಯಾಗಿದ್ದರೂ ಮಹದೇವಪುರ ಮುಖ್ಯರಸ್ತೆಯಲ್ಲಿರುವ ಅಜೀಜ್ ಸೇಠ್ ಯಾದ್ಗಾರ್ ಹೋಟೆಲ್ನಲ್ಲಿ ಗ್ರಾಹಕರಿಗೆ ಪಾರ್ಸೆಲ್ ನೀಡುವ ಬದಲು ಆಹಾರ ಸೇವಿಸಲು ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ, ಹೋಟೆಲ್ನ ಮುಜಾಹಿದ್ ಪಾಷಾ ಎಂಬುವವರ ಮೇಲೆ ಐಪಿಸಿ ಸೆಕ್ಷನ್ 188ರ ಅನ್ವಯ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಸಯ್ಯಾಜಿರಾವ್ ರಸ್ತೆಯಲ್ಲಿನ ಶಂಕರ್ ಕಾಂಪ್ಲೆಕ್ಸ್ನಲ್ಲಿ ಅರ್ಧ ಶಟರ್ ಎಳೆದು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಂದೀಶ್ ಮತ್ತು ಅರ್ಕೇಶ್ ಎಂಬುವವರ ವಿರುದ್ಧ ಇಲ್ಲಿನ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಆಘಾತಕ್ಕೆ ಯುವಕ ಬಲಿ
ಮೈಸೂರು: ಇಲ್ಲಿನ ಇಲವಾಲ ಹೋಬಳಿಯ ಸೀಗಳ್ಳಿ ಗ್ರಾಮದ ಚಂದು (20) ಶನಿವಾರ ತಮ್ಮ ಜಮೀನಿನಲ್ಲಿದ್ದ ಮೋಟಾರ್ನ್ನು ಚಾಲನೆ ಮಾಡಲು ಹೋಗಿ, ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನದ ನಾಣ್ಯ ಕೊಡುವುದಾಗಿ ನಂಬಿಸಿ ₹ 30 ಲಕ್ಷ ವಂಚನೆ
ಮೈಸೂರು: ಪುರಾತನ ಕಾಲದ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿದ ಮೋಹನ್, ಅರ್ಜುನ ಮತ್ತು ಶಾಂತಿ ಎಂಬುವವರು ಕುಂಬಾರಕೊಪ್ಪಲಿನ ನಿವಾಸಿ ಎಂ.ಜಿ.ರಾಘವೇಂದ್ರ ಅವರಿಂದ ₹ 30 ಲಕ್ಷ ಪಡೆದು ವಂಚಿಸಿದ್ದಾರೆ.
ರಾಘವೇಂದ್ರ ಅವರು ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವುಳ್ಳವರಾಗಿದ್ದು ಇವರಿಗೆ ಹಳೆಯ ಕಾಲದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿ, ಭದ್ರತೆಗಾಗಿ ಚಿನ್ನದ ಗುಂಡುಗಳನ್ನು ಆರೋಪಿಗಳು ನೀಡಿದ್ದಾರೆ. ಪರಿಶೀಲಿಸಿದಾಗ ಅವು ನಕಲಿ ಚಿನ್ನ ಎಂಬುದು ಗೊತ್ತಾಗಿದೆ. ಆರೋಪಿಗಳ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.