ಮೈಸೂರು: ‘ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು’ ಎಂದು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ಹೇಳಿದರು.
ನಗರದ ಶ್ರೀರಾಮ ಸೇವಾ ಅರಸು ಮಂಡಳಿಯಲ್ಲಿ ಶನಿವಾರ ನಡೆದ ‘ಮಹಿಳಾ ಸಶಕ್ತೀಕರಣ ಮತ್ತು ಸಮಗ್ರ ಬೆಳವಣಿಗೆ’ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನಾರಿ ಶಕ್ತಿ ದೊಡ್ಡದು. ಮಹಿಳೆಯರಲ್ಲಿ ಕ್ಷಮತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಬೇಕು. ಅವರ ಅಭಿವೃದ್ಧಿಗೆ ಪೂರಕ ಅವಕಾಶ ಒದಗಿಸಿಕೊಡಬೇಕು. ಮಹಿಳೆಯರಿಗೆ ಅಗತ್ಯವಾದ ಪರಿಕರ ಮತ್ತು ಜ್ಞಾನ ಒದಗಿಸುವ ಮೂಲಕ ಮಹಿಳಾ ಉನ್ನತೀಕರಣಕ್ಕೆ ಹಾಗೂ ಅವರ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕು’ ಎಂದು ತಿಳಿಸಿದರು.
ವಿಜ್ಞಾನಿ ವೆಂಕಟೇಶ್ ತುಳಸಿರಾಮನ್ ಮಾತನಾಡಿ, ‘ಮಹಿಳೆಯರ ಸಬಲೀಕರಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರವೂ ಮುಖ್ಯವಾಗಿದೆ. ಮಹಿಳೆಯರು ಅತ್ಯಾಧುನಿಕ ಸಂಶೋಧನೆ ಹಾಗೂ ನವೀನ ಪರಿಹಾರ ಬಳಸಿಕೊಳ್ಳುವ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದು’ ಎಂದರು.
ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಲಹೆಗಾರ ಅಭಿಷೇಕ್ ಮಾತನಾಡಿ, ‘ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವುದು ಕೇವಲ ವ್ಯಾಪಾರ ಸೃಷ್ಟಿಗಲ್ಲ. ಅವರಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಯ ಪರಿಸರ ವ್ಯವಸ್ಥೆ ಉತ್ತೇಜಿಸಲು’ ಎಂದು ತಿಳಿಸಿದರು.
ಕೃಷಿ ವಲಯದ ವಿಶೇಷ ತಾಂತ್ರಿಕ ಅಧಿಕಾರಿ ಶುಭಾ ಪುಟ್ಟಸ್ವಾಮಿ ಮಾತನಾಡಿ, ‘ಕೃಷಿಯಲ್ಲಿ ತೊಡಗಿಕೊಂಡ ಮಹಿಳೆಯರಲ್ಲಿ ಕ್ಷಮತೆ, ಚಾತುರ್ಯವನ್ನು ಬೆಳೆಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಅವರಿಗೆ ಸರ್ಕಾರದ ಯೋಜನೆಗಳನ್ನು ಪರಿಚಯಿಸುವ ಕೆಲಸವಾಗಬೇಕು. ಆ ಮೂಲಕ ಮಹಿಳೆಯರು ಅವಕಾಶಗಳನ್ನು ಪಡೆದುಕೊಂಡು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಆಗಬೇಕು’ ಎಂದು ಆಶಿಸಿದರು.
ಸಾಮಾಜಿಕ ಉದ್ಯಮಿ ಛಾಯಾ ನಂಜಪ್ಪ ಮಾತನಾಡಿ, ‘ನಮ್ಮ ಸಾಮೂಹಿಕ ದೃಷ್ಟಿಕೋನ ಎಲ್ಲರ ಒಳಗೊಳ್ಳುವಿಕೆ ಮತ್ತು ಸಬಲೀಕರಣದಲ್ಲಿ ಬೇರೂರಿದೆ. ಈ ಉಪಕ್ರಮದ ಮೂಲಕ ಮಹಿಳೆಯರು ಮತ್ತು ಸರ್ಕಾರದ ಯೋಜನೆಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕು’ ಎಂದರು.
ಪ್ರಿಯದರ್ಶಿನಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.