ಮೈಸೂರು: ಅಂಬಾರಿ ಹೊತ್ತ ಅಭಿಮನ್ಯುಗೆ ಮಾವುತ ವಸಂತ ಅವರ ಪ್ರೀತಿಯ ಮುತ್ತು, ತಮ್ಮ ನೆಚ್ಚಿನ ಆನೆಗಳೊಂದಿಗೆ ಪ್ರವಾಸಿಗರ ಸೆಲ್ಫಿ, ದಸರಾ ತಾಲೀಮಿನಿಂದ ವಿಶ್ರಾಂತಿ ಪಡೆದ ಆನೆಗಳ ನೋಟ, ನೀರಿನಾಟ... ಇವೆಲ್ಲವೂ ಅರಮನೆ ಆವರಣದ ದಸರಾ ಆನೆಗಳ ಬಿಡಾರದಲ್ಲಿ ಭಾನುವಾರ ಕಂಡುಬಂದವು.
ಮೈಮೇಲೆ ಹೂವಿನ ಚಿತ್ತಾರ ಮಾಡಿಸಿಕೊಂಡು, ರಾಜ ಗಾಂಭೀರ್ಯದಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಅಷ್ಟೂ ಆನೆಗಳು ಮಹಾಮಜ್ಜನ ಮಾಡಿಸಿಕೊಂಡವು. ಮೈಮೇಲೆ ನೀರು ಸುರಿಯುತ್ತಿದ್ದಂತೆ ಅಡ್ಡಲಾಗಿ ಮಲಗಿ ಮೈ ತಿಕ್ಕುವಂತೆ ಕಾವಾಡಿಗರನ್ನು ಪ್ರೇರೇಪಿಸಿದವು. ಮುಂಜಾನೆಯ ಚುಮುಚುಮು ಬಿಸಿಲಿಗೆ ಮೈ ಒಡ್ಡಿ ಸಂಭ್ರಮಿಸಿದವು.
ಆನೆಗಳ ವೀಕ್ಷಣೆಗೆ ಬಂದ ಪ್ರವಾಸಿಗರು ಅಂಬಾರಿ ಹೊತ್ತ ಅಭಿಮನ್ಯು ಎಲ್ಲಿ ಎಂದು ಕೇಳುತ್ತಾ ಆತನ ಹತ್ತಿರ ತೆರಳಿ ಫೋಟೊ ತೆಗೆದುಕೊಂಡು ಸಂಭ್ರಮಿಸಿದರು. ಮಾವುತ ವಸಂತ ಅವರನ್ನು ಅಭಿನಂದಿಸಿದರು.
ಹಿರಣ್ಯ ಆನೆ ಸ್ನಾನದ ಬಳಿಕ ಬಹಳ ಸಂಭ್ರಮದಿಂದ ಓಡಾಡಿತು. ಏಕಲವ್ಯ ಮತ್ತು ಲಕ್ಷ್ಮಿ ಆನೆಗಳ ಮುದ್ದಾಟ ನೋಡುಗರ ಗಮನಸೆಳೆಯಿತು. ದಸರಾ ಅಲಂಕಾರಕ್ಕೆಂದು ಆನೆಗಳಿಗೆ ಬಳಸಿದ್ದ ವಿವಿಧ ವಸ್ತುಗಳನ್ನು ವಾಪಸ್ ಮಾಡಲಾಯಿತು. ಮಾವುತರು ಮತ್ತು ಕಾವಾಡಿಗರ ತಾತ್ಕಾಲಿಕ ಮನೆಗಳಲ್ಲಿ ಊರಿಗೆ ತೆರಳುವ ತಯಾರಿ ನಡೆಯಿತು.
ಅಂಬಾರಿಯನ್ನು ಶನಿವಾರ ರಾತ್ರಿಯೇ ವಾಹನದಲ್ಲಿ ತಂದು ಅರಮನೆಯಲ್ಲಿ ಸ್ವಸ್ಥಾನಕ್ಕೆ ಇಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.