ಜಯಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಜೋಡಿಕಟ್ಟೆ ಮಲೆಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ರಾತ್ರಿ (ಫೆ.10) ನಡೆಯಲಿದ್ದು, ಮಂಗಳವಾರ (ಫೆ.11) ಸೂರ್ಯೋದಯಕ್ಕೂ ಮುಂಚೆ ಕೊಂಡೋತ್ಸವ ಜರುಗಲಿದೆ.
ಜಾತ್ರಾ ಮಹೋತ್ಸವವನ್ನು ಮಾವಿನಹಳ್ಳಿ, ಜಯಪುರ, ಬರಡನಪುರ ಗ್ರಾಮಸ್ಥರು ಒಟ್ಟಾಗಿ ಸೇರಿ ಆಚರಿಸುತ್ತಾರೆ.
ಸೋಮವಾರ ಬೆಳಿಗ್ಗೆ ಬರಡನಪುರ ಗ್ರಾಮದಿಂದ ಮಹದೇಶ್ವರ ಸ್ವಾಮಿಯ ‘ಹುಲಿ ವಾಹನ’ವನ್ನು ಜಯಪುರ ಜೋಡಿಕಟ್ಟೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಬರಡನಪುರದಿಂದ ಬರುವಾಗ ದಾರಿಯುದ್ದಕ್ಕೂ ಭಕ್ತರು ಈಡುಗಾಯಿ ಒಡೆಯುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವಿನಿಯೋಗ ಮಾಡಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್ ನಾಗೇಶ್ ತಿಳಿಸಿದರು.
ಸೋಮವಾರ ರಾತ್ರಿ ಮಾವಿನಹಳ್ಳಿಯಿಂದ ಹಾಲರವಿ ಹೊರಡಲಿದೆ. ಬದನವಾಳು ಬಸವರಾಜ್ ಶಾಸ್ತ್ರಿಗಳ ನೇತೃತ್ವದಲ್ಲಿ ಮಹದೇಶ್ವರ ಸ್ವಾಮಿ ಕಥೆಯನ್ನು ಏರ್ಪಡಿಸಲಾಗಿದೆ.
ಮಂಗಳವಾರ ಮುಂಜಾನೆ ಕೊಂಡೋತ್ಸವ ಜರುಗಲಿದೆ. ನಂತರ ದೇವಾಲಯದ ಸುತ್ತ ಹುಲಿವಾಹನದೊಂದಿಗೆ ಪಂಜಿನ ಸೇವೆ ನಡೆಯಲಿದೆ. ಜೊತೆಗೆ ಜಾನುವಾರು ಪ್ರದಕ್ಷಿಣೆ ಹಾಕಿಸುವುದು ವಾಡಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.