
ಸರಗೂರು: ಸಮೀಪದ ನಿಲವಾಗಿಲು ಮತ್ತು ತುಂಬಸೋಗೆ ಮಹದೇಶ್ವರಸ್ವಾಮಿ ದನಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ವಿಜೃಂಭಣೆಯಿಂದ ಕೊಂಡೋತ್ಸವ ನೆರವೇರಿತು.
ಸಾವಿರಾರು ಭಕ್ತರು ಆಗಮಿಸಿ ಕೊಂಡೋತ್ಸವದಲ್ಲಿ ಭಾಗವಹಿಸಿ ಹರಕೆ ಹೊತ್ತು ಕೆಂಡದ ಮೇಲೆ ನಡೆದು ಮಹದೇಶ್ವರಸ್ವಾಮಿ ದರ್ಶನ ಪಡೆದು ಪುನೀತರಾದರು. ದೇವಾಲಯದಲ್ಲಿ ಬಿಡುಗಲು ಪಡವಲು ವಿರಕ್ತ ಮಠದ ಮಹದೇವಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಹೋಮ ಹಾಗೂ ಸ್ವಾಮಿಗೆ ರುದ್ರಾಭಿಷೇಕ ನಡೆಸಲಾಯಿತು.
ಹುಲಿವಾಹನ, ಬಸವ ವಾಹನ, ಉತ್ಸವ ಮೂರ್ತಿಯನ್ನು ನಿಲವಾಗಿಲು ಮತ್ತು ತುಂಬಸೋಗೆ ಗ್ರಾಮಗಳಿಂದ ತಂದು ಮೆರವಣಿಗೆ ನಡೆಸಿದ ಬಳಿಕ ಜಾತ್ರಾಮಾಳದಲ್ಲಿ ಇರಿಸಲಾಯಿತು. ಸ್ವಾಮಿಗೆ ಹಾಲು ಹರವಿ ಸೇವೆ ಹಾಗೂ ಕೊಂಡೋತ್ಸವ ನಡೆಯಿತು. ರಾತ್ರಿ ಹೆಗ್ಗಡಾಪುರ ಗ್ರಾಮದ ಶ್ರೀಕಾಳಮ್ಮ ಕೃಪಾಪೋಷಿತ ನಾಟಕ ಮಂಡಳಿ ಅವರಿಂದ ‘ಶನಿಪ್ರಭಾವ’ ಪೌರಾಣಿಕ ನಾಟಕ ನಡೆಯಿತು. ಅನ್ನ ಸಂತರ್ಪಣೆ ನಡೆಯಿತು.
ದೇವಸ್ಥಾನದ ಸಮಿತಿ ಅಧ್ಯಕ್ಷ ಬಿ.ನಂಜಪ್ಪ, ಕಾರ್ಯದರ್ಶಿ ಪ್ರಕಾಶ್, ಸಮಿತಿ ಮುಖಂಡರಾದ ಬಿ.ಸಿ.ಬಸಪ್ಪ, ನಂಜುಡಸ್ವಾಮಿ, ರಾಜಣ್ಣ, ಗೋಪಾಲಯ್ಯ, ಅಂಕನಾಯಕ, ಬಿ.ಎಸ್. ಚನ್ನನಾಯಕ, ನಾಗರಾಜು, ಶಿವಣ್ಣ, ವೆಂಕಟ್ಟಪ್ಪ, ವೆಂಕಟಾಚಲ, ಮಂಜು, ಸುರೇಶ್, ನಾಗಣ್ಣ, ಸೋಮಯ್ಯ, ಅನ್ನದಾನ ಸಮಿತಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸಣ್ಣಗೌಡ ಭಾಗವಹಿಸಿದ್ದರು.
ರಥೋತ್ಸವ: ಬುಧವಾರ ಬೆಳಿಗ್ಗೆ ಮಹದೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ರಾತ್ರಿ 10ಕ್ಕೆ ಗಂಟಗೆ ರಾಜಣ್ಣ ಮತ್ತು ಜೈಕುಮಾರ್ ತಂಡದವರಿಂದ ರಸಮಂಜರಿ ನಡೆಯಲಿದೆ. ಕಪಿಲಾ ನದಿಯಲ್ಲಿ ಮಹದೇಶ್ವರ ಸ್ವಾಮಿ ತೆಪ್ಪೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.