ಮೈಸೂರು: ‘ಪಿಎಫ್ಐ ಸಂಘಟನೆಯನ್ನು 5 ವರ್ಷಗಳವರೆಗೆ ನಿಷೇಧಿಸಿರುವ ಕೇಂದ್ರ ಸರ್ಕಾರದ ಆದೇಶವು ಸ್ವಾಗತಾರ್ಹವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಧರ್ಮಾಧಾರಿತವಾಗಿ ಸಾಮಾಜಿಕ ಸಾಮರಸ್ಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಪಿಎಫ್ಐನಂತಹ ಧಾರ್ಮಿಕ ಅತಿರೇಕದ ಸಂಘಟನೆಗಳನ್ನು ನಿಷೇಧಿಸಿರುವುದು ಸ್ವಾಗತಾರ್ಹ. ಆದರೆ, ದೇಶವು ಅಭಿವೃದ್ಧಿ ಮತ್ತು ಜನರಿಗೆ ಅನುಕೂಲ ಆಗುವಂತಹ ವಿಷಯಗಳ ಚರ್ಚೆಯಿಂದ ದೂರವೇ ಸಾಗುತ್ತಿದ್ದು ಅದು ಮತ್ತಷ್ಟು ಹೆಚ್ಚಾಗುವ ಪರಿಸ್ಥಿತಿ ಉಂಟಾಗಿದೆ’ ಎಂದು ಹೇಳಿದ್ದಾರೆ.
‘ಕೇಂದ್ರವು ಯಾವ ಮಾನದಂಡಗಳನ್ನು ಅನುಸರಿಸಿ ಆ ಸಂಘಟನೆ ನಿಷೇಧಿಸಿದೆಯೋ ಅವು ನಿಜವಾಗಿದ್ದರೆ, ಅದು ಆರ್ಎಸ್ಎಸ್, ಎಸ್ಡಿಪಿಐ, ಬಜರಂಗ ದಳ, ಹಿಂದೂ ಪರಿಷತ್ ಹಾಗೂ ಶ್ರೀರಾಮ ಸೇನೆಯಂತಹ ಧಾರ್ಮಿಕ ತೀವ್ರವಾದಿ ಸಂಘಟನೆಗಳಿಗೂ ಅನ್ವಯಿಸುತ್ತದೆ. ಆದ್ದರಿಂದ ಅಂತಹ ಅಸಂವಿಧಾನಿಕ ಮಾರ್ಗದ ಸಂಘಟನೆಗಳನ್ನೂ ನಿಷೇಧಿಸುವುದು ಸಮಾಜದ ಏಳಿಗೆ, ಆರೋಗ್ಯ ಮತ್ತು ಸಾಮರಸ್ಯದ ದೃಷ್ಟಿಯಿಂದ ಉತ್ತಮವಾದ ಮತ್ತು ಅಷ್ಟೇ ಜವಾಬ್ದಾರಿಯುತವಾದ ಕೆಲಸ ಎನಿಸಿಕೊಳ್ಳುತ್ತದೆ’ ಎಂದು ಹೇಳಿದ್ದಾರೆ.
‘ಹಿಂದೂ ಪರ ಸಂಘಟನೆಗಳಿಂದ ಹಿಂದೂಗಳ, ಮುಸ್ಲಿಂ ಪರ ಸಂಘಟನೆಗಳಿಂದ ಮುಸ್ಲಿಮರ ರಕ್ಷಣೆ ಆಗುವುದಿಲ್ಲ. ಎಲ್ಲರ ರಕ್ಷಣೆ ಆಗುವುದು ಸಂವಿಧಾನದಿಂದ ಮಾತ್ರ. ಹೀಗಾಗಿ ಹಿಂದೂ–ಮುಸ್ಲಿಂ ಎನ್ನದೇ ಸಮಾಜದ ಸಾಮರಸ್ಯ ಹಾಳು ಮಾಡುವ ಎಲ್ಲ ಧರ್ಮಾಧಾರಿತ ಸಂಘಟನೆಗಳನ್ನೂ ನಿಷೇಧಿಸಿ, ಸಂವಿಧಾನದ ಆಶಯದ ರಕ್ಷಿಸುವಕ್ಷಣೆ ಜವಾಬ್ದಾರಿ ಪ್ರಜ್ಞೆಯನ್ನು ಬೆಳೆಸಬೇಕು’ ಎಂದು ಅಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.