ADVERTISEMENT

ಪದ್ಮಶ್ರೀ ಮಹಾಮಹೋಪಾಧ್ಯಾಯ ಡಾ.ರಾ.ಸತ್ಯನಾರಾಯಣ ನಿಧನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 18:35 IST
Last Updated 16 ಜನವರಿ 2020, 18:35 IST
ಡಾ.ರಾ.ಸತ್ಯನಾರಾಯಣ
ಡಾ.ರಾ.ಸತ್ಯನಾರಾಯಣ   

ಮೈಸೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾಂಸ ಡಾ.ರಾ.ಸತ್ಯನಾರಾಯಣ (93) ಅವರು ಗುರುವಾರ ರಾತ್ರಿ ಇಲ್ಲಿನ ಜಯನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಇವರಿಗೆ ಪುತ್ರ ರಾ.ಸ.ನಂದಕುಮಾರ್ ಹಾಗೂ ಪುತ್ರಿ ರೋಹಿಣಿ ಸುಬ್ಬರತ್ನಂ ಇದ್ದಾರೆ.

ನಿವಾಸದಲ್ಲಿ ಶುಕ್ರವಾರ ಮಧ್ಯಾಹ್ನ 1.30ರವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4.30ಕ್ಕೆ ಅಂತ್ಯಸಂಸ್ಕಾರವು ಮೈಸೂರು– ಬೆಂಗಳೂರು ರಸ್ತೆಯ ಕೆಂಗಲ್ ಗ್ರಾಮದ ಬಳಿಯ ‘ರಸ ಋಷಿ’ ಆಶ್ರಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಇವರು ತಮ್ಮ ಅಂತಿಮ ಕ್ಷಣದವರೆಗೂ ‘ಸಂಗೀತ ಸುಧಾಕರ’ ಎಂಬ ಪುಸ್ತಕ ರಚನೆಯಲ್ಲಿ ತೊಡಗಿದ್ದರು. ‘ಇನ್ನು ನನ್ನ ಕೈಯಲ್ಲಿ ಆಗುವುದಿಲ್ಲ. ಈ ಕೆಲಸವನ್ನು ಮುಂದುವರಿಸು ಎಂದು ನನಗೆ ಹೇಳಿದ್ದರು’ ಎಂದು ಪುತ್ರ ರಾ.ಸ.ನಂದಕುಮಾರ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ಜಯಚಾಮರಾಜ ಒಡೆಯರ್ ಅವರ ಆಸ್ಥಾನದಲ್ಲಿ ಸಂಗೀತ ವಿದ್ವಾಂಸರಾಗಿದ್ದ ರಾಮಯ್ಯ ಅವರ ಪುತ್ರರಾದ ಇವರು ಸಂತ ತ್ಯಾಗರಾಜ ಸಂಗೀತ ಪರಂಪರೆಯನ್ನು ಮುಂದುವರಿಸಿದವರು. ಇವರಿಗೆ ಕಾಶಿ ವಿಶ್ವವಿದ್ಯಾಲಯದಿಂದ ಮಹೋಪಧ್ಯಾಯ, ರಾಜ್ಯ ಸಂಗೀತ ವಿದ್ವಾನ್, ಸಂಗೀತ ನಾಟಕ ಅಕಾಡೆಮಿ ರತ್ನ, ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದವು.

ಇವರ ಶಿಷ್ಯರು ಜರ್ಮನಿ, ಇಟಲಿ ಸೇರಿದಂತೆ ಪ್ರಪಂಚದ ನಾನಾ ಭಾಗಗಳಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.