ಮೈಸೂರು: ಜಂಬೂ ಸವಾರಿಯ ದಿನ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮಹಿಷ ದಸರಾ ಆಚರಣಾ ಸಮಿತಿ ವಾಪಸ್ ಪಡೆದಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಪುರುಷೋತ್ತಮ್, ‘ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ. ರಾಷ್ಟ್ರಪತಿಯವರು ಅ. 10ರಂದು ಮೈಸೂರಿಗೆ ಬರಲಿದ್ದು, ಅವರಿಗೆ ಮನವಿ ಸಲ್ಲಿಸಲಾಗುವುದು. ಮಹಿಷ ದಸರೆ ಆಚರಣೆ ಮಾಡಬೇಕು ಎಂಬ ನಮ್ಮ ಒತ್ತಾಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಜಂಬೂಸವಾರಿಯ ದಿನ ಪ್ರತಿಭಟನೆ ನಡೆಸುವುದಿಲ್ಲ’ ಎಂದು ಹೇಳಿದ್ದಾರೆ.
ಮಹಿಷ ದಸರೆಗೆ ತಡೆಯೊಡ್ಡಿದ್ದರಿಂದ ಸಮಿತಿ ಸದಸ್ಯರು ಜಂಬೂಸವಾರಿಯ ದಿನ ಪ್ರತಿಭಟನೆ ನಡೆಸಿ, ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಬೆದರಿಕೆಯೊಡ್ಡಿದ್ದರು. ಶನಿವಾರವಷ್ಟೇ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಲೆತ್ನಿಸಿದ ಸಮಿತಿಯ 145 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಬಳಿಕ ಬಿಡುಗಡೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.