ADVERTISEMENT

ಮೈಸೂರು: ಯುವತಿಯನ್ನು ಕೊಲೆ ಮಾಡಿ ನೇಣಿಗೆ ಶರಣಾದ ವ್ಯಕ್ತಿ

ಕೊಲೆ ಮಾಡಿದ ನಂತರ ಸ್ನೇಹಿತರಿಗೆ ಮಾಹಿತಿ ರವಾನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 6:22 IST
Last Updated 4 ಫೆಬ್ರುವರಿ 2021, 6:22 IST
ವ್ಯಕ್ತಿ ಸಾವು–ಪ್ರಾತಿನಿಧಿಕ ಚಿತ್ರ
ವ್ಯಕ್ತಿ ಸಾವು–ಪ್ರಾತಿನಿಧಿಕ ಚಿತ್ರ   

ಮೈಸೂರು: ಇಲ್ಲಿನ ಹೆಬ್ಬಾಳದಲ್ಲಿರುವ ಖಾಸಗಿ ಹೋಟೆಲ್‌ವೊಂದರಲ್ಲಿ ಬುಧವಾರ ಎಚ್.ಎಂ.ಲೋಕೇಶ್‌ (39) ಎಂಬಾತ ತನ್ನ ಗೆಳತಿ ಅಮೂಲ್ಯಾ (22) ಎಂಬುವವರನ್ನು ಕೊಲೆ ಮಾಡಿ, ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.

ವೃತ್ತಿಯಲ್ಲಿ ಪ್ರಥಮದರ್ಜೆ ಗುತ್ತಿಗೆದಾರನಾಗಿದ್ದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ವಿವಾಹಿತ ಎಚ್.ಎಂ.ಲೋಕೇಶ್‌ ಅವರು ಇದೇ ತಾಲ್ಲೂಕಿನ ಅಮೂಲ್ಯಾ ಎಂಬ ಯುವತಿಯೊಂದಿಗೆ ಇಲ್ಲಿನ ಪ್ರತಿಷ್ಠಿತ ಹೋಟೆಲ್‌ಗೆ ಬೆಳಿಗ್ಗೆ ಬಂದಿದ್ದಾರೆ. ನಂತರ ಆಹಾರವನ್ನೂ ಸೇವಿಸಿದ್ದಾರೆ.

ಬಳಿಕ ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿದ ಲೋಕೇಶ್, ತಾನು ಅಮೂಲ್ಯಾ ಅವರನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸ್ನೇಹಿತರು ಪೊಲೀಸರೊಂದಿಗೆ ಹೋಟೆಲ್ ತಲುಪುವಷ್ಟರಲ್ಲಿ ಲೋಕೇಶ್ ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಮೂಲ್ಯಾ ಅವರ ಶವ ನೆಲದ ಮೇಲೆ ದೊರಕಿದ್ದು, ಕುತ್ತಿಗೆ ಹಿಸುಕಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೃತ ಲೋಕೇಶ್‌ ನಾಗಮಂಗಲದ ಪ್ರಭಾವಿ ರಾಜಕಾರಣಿಯೊಬ್ಬರ ಜತೆ ನಿಕಟ ಸಂಬಂಧ ಹೊಂದಿದ್ದು, ಇವರಿಗೆ 8ನೇ ತರಗತಿ ವ್ಯಾಸಂಗ ಮಾಡುವ ಪುತ್ರಿ ಇದ್ದಾರೆ. ಕೊಲೆಗೀಡಾದ ಯುವತಿಯು ಮೈಸೂರಿನ ಕಾಲೇಜೊಂದರಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್. ಪ್ರಕಾಶ್‌ಗೌಡ ತೆರಳಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ; ವ್ಯಕ್ತಿ ಸಾವು

ಮೈಸೂರು: ಇಲ್ಲಿನ ಬೋಗಾದಿಯ ರಿಂಗ್‌ರಸ್ತೆಯ ಪೆಟ್ರೋಲ್ ಬಂಕ್‌ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿದ್ದು, ಚಾಲಕ ನವೀನ್‌ (34) ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೆ.ಆರ್.ಸಂಚಾರ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾರು ಹಿನಕಲ್‌ ಕಡೆಯಿಂದ ಶ್ರೀರಾಂಪುರದ ಕಡೆಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.