
ಎಚ್.ಡಿ.ಕೋಟೆ: ನಾನು ಶಾಸಕನಾಗಿ ಆಯ್ಕೆಯಾದ ಅಂದಿನಿಂದ ಇಂದಿನವರೆಗೂ ತಾಲ್ಲೂಕಿನಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿ ಒತ್ತು ನೀಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಚ್.ಡಿ. ಕೋಟೆ ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳ ಸಂಘದ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ವಾರ್ಷಿಕೋತ್ಸವವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ತಾಲ್ಲೂಕು ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇದ್ದು, ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಔಷಧಗಳ ವಿತರಣೆಗೆ ಒತ್ತು ನೀಡುವಂತೆ ಬೇಡಿಕೆ ಇಡಲಾಗುವುದು. ತಾಲ್ಲೂಕಿನಲ್ಲಿ 380 ಔಷಧಗಳ ಬೇಡಿಕೆ ಇದ್ದು, ಅವುಗಳಲ್ಲಿ 90 ಔಷಧಗಳು ಮಾತ್ರ ಸರಬರಾಜಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದರು.
‘ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲ್ಲೂಕಿಗೆ ಆಗಮಿಸುತ್ತಿದ್ದು, ಆ ವೇಳೆ ಬೇಡಿಕೆಗಳ ಬಗ್ಗೆ ಅವರೊಂದಿಗೆ ಚರ್ಚಿಸಲಾಗುವುದು, ಅಲ್ಲದೇ ನಿಮಗೂ ಅವರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗುವುದು, ಆಗ ನಿಮ್ಮ ಬೇಡಿಕೆಯನ್ನು ಸಲ್ಲಿಸಿ’ ಎಂದು ತಿಳಿಸಿದರು.
ಎಚ್.ಡಿ.ಕೋಟೆ ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ರಾಮಚಂದ್ರನಾಯಕ ಮಾತನಾಡಿ, ‘ಎಚ್.ಡಿ. ಕೋಟೆ ತಾಲ್ಲೂಕು ಆರೋಗ್ಯ ಕ್ಷೇತ್ರದಲ್ಲಿ ಎಲ್ಲಾ ವಿಭಾಗಗಳಲ್ಲೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುತ್ತಿದೆ, ಆದರೆ ಆರೋಗ್ಯ ಇಲಾಖೆಯಲ್ಲಿ ನೌಕರರ ಸಂಖ್ಯೆ ಹೇರಳವಾಗಿ ಕಡಿಮೆಯಾಗಿದೆ’ ಎಂದು ಬೇಸರಿಸಿದರು.
‘ತಾಲ್ಲೂಕು ಕೇರಳ ಗಡಿಯಲ್ಲಿರುವುದು ಹಾಗೂ ಅರಣ್ಯ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದಾಗಿ ನೌಕರರು ತಾಲ್ಲೂಕಿಗೆ ಬಂದು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ, ಇದರಿಂದಾಗಿ ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರತೆ ಇದೆ’ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್, ವೈದ್ಯಾಧಿಕಾರಿ ಸಂಘದ ಅಧ್ಯಕ್ಷ ಶರತ್, ವೈದ್ಯರಾದ ರೋಹನ್, ತಿರು ಮಹದೇವಸ್ವಾಮಿ, ಕೀರ್ತಿ, ಸೋಮಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಜಗದೀಶ್, ಸೋಮಶೇಖರ್, ಚಂದ್ರು, ಪರಮೇಶ್, ಜಯಮ್ಮ, ಉದಯಕುಮಾರ್, ನಾಗೇಂದ್ರ, ನಿವೃತ್ತ ವೈದ್ಯ ಜಯಂತ್, ಡಿವೈಎಸ್ಪಿ ರವಿ, ವೃತ್ತ ನಿರೀಕ್ಷಕ ಎಸ್. ಗಂಗಾಧರ್, ಮುಖಂಡರಾದ ಮಧುಕುಮಾರ್, ಅನಿಲ್, ಸುವರ್ಣ, ಮುದ್ದುಮಲ್ಲಯ್ಯ, ಪ್ರಕಾಶ್, ನಾಗರಾಜು, ಪಾಲಾಕ್ಷ, ಎಂ. ನಾಗು, ರವಿರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.