ಮೈಸೂರು: ಸಂಜೆ ವೇಳೆ ಬೆಂಗಳೂರು– ಮೈಸೂರು ನಡುವಿನ ರೈಲಿನ ಕೊರತೆ ನೀಗಿಸುವ ಸಲುವಾಗಿ ನೈರುತ್ಯ ರೈಲ್ವೆಯು ಕೇಂದ್ರೀಯ ರೈಲ್ವೆ ಮಂಡಳಿಗೆ ವಾರದಲ್ಲಿ ನಾಲ್ಕು ದಿನ ವಿಶೇಷ ವಿದ್ಯುತ್ ರೈಲು (ಮೆಮು) ನೀಡುವಂತೆ ಪ್ರಸ್ತಾವ ಸಲ್ಲಿಸಿದೆ.
ಮೈಸೂರಿನ ಮುಖಾಂತರ ಬೆಂಗಳೂರು– ಕಾರವಾರ ರೈಲು ವಾರದ ಮೂರು ದಿನಗಳು ಮಾತ್ರ ಸಂಚರಿಸುತ್ತಿದೆ. ಹಾಗಾಗಿ, ಬಾಕಿ ನಾಲ್ಕು ದಿನಗಳು ರಾತ್ರಿ 8ರ ನಂತರ ಮೈಸೂರಿಗೆ ರೈಲು ಇಲ್ಲದಂತೆ ಆಗಿದೆ. ಇದರಿಂದ ರೈಲಿನಲ್ಲಿ ಮೈಸೂರಿಗೆ ಬರುತ್ತಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಬಸ್ಸಿನಲ್ಲಿ ಬರುವಂತೆ ಆಗಿದೆ. ಈ ಕುರಿತು ಪ್ರಯಾಣಿಕರುನಿರಂತರವಾಗಿ ನೈರುತ್ಯ ರೈಲ್ವೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಪತ್ರ ಬರೆದಿದೆ.
ಈಗ ಪ್ರತಿದಿನ ರಾತ್ರಿ 8ಕ್ಕೆ ಬೆಂಗಳೂರಿನಿಂದ ರಾಮನಗರಕ್ಕೆ ಸಂಚರಿಸುತ್ತಿರುವ ‘ಮೆಮು’ ರೈಲನ್ನು ಮೈಸೂರಿಗೆ ವಿಸ್ತರಿಸುವಂತೆ ಕೋರಿದೆ. ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಮೈಸೂರಿನವರೆಗೆ ಈ ರೈಲನ್ನು ನೀಡುವಂತೆ ಮನವಿ ಮಾಡಿದೆ. ಇದು ತಾತ್ಕಾಲಿಕ ರೈಲಾಗಿದ್ದು, 2019ರಫೆಬ್ರವರಿವರೆಗೆ ಮಾತ್ರ ಈ ರೈಲು ಸಂಚರಿಸಲಿದೆ. ಬಳಿಕ, ಮತ್ತೆ ಮನವಿ ಸಲ್ಲಿಸಿ ಈ ವಿಶೇಷ ರೈಲನ್ನು ಮರು ಪಡೆಯಬೇಕಾಗುತ್ತದೆ.
ಪ್ರತಾಪ ಸಿಂಹ ಮನವಿ
ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ ಸಿಂಹ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ್ದು, ಈ ವಿಶೇಷ ರೈಲನ್ನು ನೀಡುವಂತೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.