
ಮೈಸೂರು: ‘ರೈತರು ಮಳೆಯಿಂದಾಗಿ ಬೆಳೆ ಹಾನಿ, ಬರಗಾಲ ಹಾಗೂ ಬೆಲೆ ದೊರೆಯದೆ ನಷ್ಟ ಅನುಭವಿಸುವ ಸನ್ನಿವೇಶದಲ್ಲಿ ಹೈನುಗಾರಿಕೆಯು ಸಂಜೀವಿನಿಯಾಗಿದೆ’ ಎಂದು ಶಾಸಕ, ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಮೈಮುಲ್) ಮತ್ತು ಭಾರತೀಯ ಡೇರಿ ಅಸೋಸಿಯೇಷನ್ ರಾಜ್ಯ ಶಾಖೆ ಸಹಯೋಗದಲ್ಲಿ ಕ್ಷೀರಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ ಜನ್ಮ ದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ರಾಷ್ಟ್ರೀಯ ಹಾಲು ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.
‘ಕುರಿಯನ್ ಅವರ ದೂರದೃಷ್ಟಿಯಿಂದಾಗಿ ಕ್ಷೀರ ಉದ್ಯಮ ದೇಶದಾದ್ಯಂತ ದೊಡ್ಡದಾಗಿ ಬೆಳೆಯಲು ಸಹಕಾರಿಯಾಯಿತು. ಅವರನ್ನು ಸ್ಮರಿಸಬೇಕು’ ಎಂದರು.
‘ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿ, ಎಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದ ವೇಳೆ ಸ್ಪೇಪ್ ಯೋಜನೆ ಜಾರಿಗೆ ತಂದು, ಮಹಿಳಾ ಹಾಲು ಉತ್ಪಾದಕರು ದೇಶದ ಪ್ರವಾಸ ಕೈಗೊಳ್ಳುವಂತೆ ಮಾಡಿದರು. ಈಗ, ನಂದಿನಿಯ 167 ಉತ್ಪನ್ನಗಳ ಮಾರಾಟ ನಡೆದಿದೆ. ಲೀಟರ್ ಹಾಲಿಗೆ ₹ 5ಸಾವಿರ ಪ್ರೋತ್ಸಾಹಧನ ದೊರೆಯುತ್ತಿದೆ. ಸಿದ್ದರಾಮಯ್ಯ ಅವರು ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿ ಡೇರಿಗಳ ಉಳಿವಿಗೆ ಅನುಕೂಲ ಮಾಡಿಕೊಟ್ಟರು. ಇಂತಹ ಕ್ಷೇತ್ರವನ್ನು ಉಳಿಸಿಕೊಂಡು ಹೋಗಬೇಕು’ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಐಡಿಎ ದಕ್ಷಿಣ ವಲಯ ಅಧ್ಯಕ್ಷ ಸತೀಶ್ ಕುಲಕರ್ಣಿ, ‘ಹಾಲು ಉತ್ಪಾದನೆಯಲ್ಲಿ 20 ವರ್ಷದಿಂದ ಮೊದಲ ಸ್ಥಾನದಲ್ಲಿದ್ದೇವೆ’ ಎಂದರು.
ಉತ್ತಮ ಮಹಿಳಾ ಹಾಲು ಉತ್ಪಾದಕಿಯರಾದ ಶಿವಾನಿ ರಾಜಶೇಖರ್ (ಧಾರವಾಡ), ಜ್ಯೋತಿ ಉಮೇಶ್(ಮೈಸೂರು) ಹಾಗೂ ಮಂಜುಳಾ(ಚಿಕ್ಕಬಳ್ಳಾಪುರ) ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಚನ್ನೇಗೌಡ, ಬಿ.ಎಸ್.ಗಂಗಾಧರ್, ಎನ್ಡಿಡಿಬಿ ನಿರ್ದೇಶಕ ಬೆಳವಾಡಿ ಅವರನ್ನು ಸನ್ಮಾನಿಸಲಾಯಿತು.
ಮೈಮುಲ್ ಅಧ್ಯಕ್ಷ ಕೆ.ಈರೇಗೌಡ, ನಿರ್ದೆಶಕರಾದ ಎ.ಟಿ.ಸೋಮಶೇಖರ, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಆರ್.ಚೆಲುವರಾಜು, ಕೆ.ಎಸ್.ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ.ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್.ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.