ADVERTISEMENT

ಮಕ್ಕಳ ಆಸ್ಪತ್ರೆ ಆರಂಭಿಸಲು ‌ಸೂಚನೆ: ವಿಧಾನಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌

ಸಾರ್ವಜನಿಕ ಆಸ್ಪತ್ರೆಗೆ ಲಿಕ್ವಿಡ್ ಆಕ್ಸಿಜನ್ ಯಂತ್ರ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 3:30 IST
Last Updated 20 ಜೂನ್ 2021, 3:30 IST
ಹರ್ಬಲ್ ಲೈಫ್ ಸಂಸ್ಥೆಯಿಂದ ನೀಡಲಾದ 5 ಲಿಕ್ವಿಡ್ ಆಕ್ಸಿಜನ್ ಯಂತ್ರಗಳನ್ನು ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ಅಡಗೂರು ಎಚ್.ವಿಶ್ವನಾಥ್ ಅವರು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜೇ ಅರಸು ಅವರಿಗೆ ಹಸ್ತಾಂತರಿಸಿದರು
ಹರ್ಬಲ್ ಲೈಫ್ ಸಂಸ್ಥೆಯಿಂದ ನೀಡಲಾದ 5 ಲಿಕ್ವಿಡ್ ಆಕ್ಸಿಜನ್ ಯಂತ್ರಗಳನ್ನು ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ಅಡಗೂರು ಎಚ್.ವಿಶ್ವನಾಥ್ ಅವರು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜೇ ಅರಸು ಅವರಿಗೆ ಹಸ್ತಾಂತರಿಸಿದರು   

ಹುಣಸೂರು: ಕೊರೊನಾ ಸೋಂಕಿನಿಂದ ಬಳಲುವ ರೋಗಿಗಳಿಗೆ ದಾನಿಗಳು ನೀಡುವ ಔಷಧಿ ಮತ್ತು ಚಿಕಿತ್ಸಾ ಪರಿಕರಗಳನ್ನು ನಾಗರಿಕರಿಗೆ ತಲುಪಿಸುವ ಕೆಲಸ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಹೇಳಿದರು.

ಹರ್ಬಲ್ ಲೈಫ್ ಸಂಸ್ಥೆ ನೀಡಿದ್ದ ಲಿಕ್ವಿಡ್ ಆಕ್ಸಿಜನ್ ಯಂತ್ರಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆ ಆಡಳಿತಾ ಧಿಕಾರಿಗೆ ಶನಿವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ದಾನಿಗಳನ್ನು ಸಂಪರ್ಕಿಸಿ ಅವರಿಂದ ಪಡೆದ ಪರಿಕರಗಳನ್ನು ಸಾರ್ವಜನಿಕರ ಶುಶ್ರೂಷೆಗೆ ಬಳಸಿಕೊಳ್ಳಬೇಕು. ಹರ್ಬಲ್ ಲೈಫ್ ಸಂಸ್ಥೆ ಸಿ.ಇ.ಒ ಅಜಯ್ ಖನ್ನಾ ಮೈಸೂರು ಜಿಲ್ಲೆಗೆ ತಲಾ ₹8 ಲಕ್ಷ ಬೆಲೆ ಬಾಳುವ 15 ಲಿಕ್ವಿಡ್ ಆಕ್ಸಿಜನ್ ಯಂತ್ರಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಪೈಕಿ ಹುಣಸೂರು, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ತಲಾ 5 ಯುನಿಟ್ ವಿತರಿಸಲಾಗಿದೆ ಎಂದರು.

ADVERTISEMENT

ಕೊರೊನಾ ಮೂರನೆ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ತಾಲ್ಲೂಕು ಆಡಳಿತ 50 ಹಾಸಿಗೆ ಸಾಮರ್ಥ್ಯದ ಪ್ರತ್ಯೇಕ ಕೊರೊನಾ ಕೇರ್ ಕೇಂದ್ರ ತೆರೆದು ಸಜ್ಜಾಗಬೇಕು. ತಾತ್ಕಾಲಿಕ ಆಸ್ಪತ್ರೆ ತೆರೆಯಲು ತಗಲುವ ವೆಚ್ಚವನ್ನು ವಿಧಾನಪರಿಷತ್ ನಿಧಿಯಿಂದ ನೀಡಲು ಸಿದ್ಧ. ಜೀವ ರಕ್ಷಕ ಔಷಧಿ ದಾಸ್ತಾನಿಗೆ ಕ್ರಮವಹಿಸಬೇಕು ಎಂದರು.

ತಾಲ್ಲೂಕಿನ 54 ಹಾಡಿಗಳ ಗಿರಿಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಮಕ್ಕಳಿಗೆ ಸೋಂಕು ತಗುಲದಂತೆ ಕ್ರಮವಹಿಸುವ ಯೋಜನೆ ರೂಪಿಸಬೇಕಿದ್ದು, ಈ ಸಂಬಂಧ ಜೂನ್‌ 22ರಂದು ಸಭೆ ನಡೆಸಲಾಗುವುದು. ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಫಿವರ್ ಘಟಕ ನಿರ್ಮಿಸಲು ವಿಧಾನಪರಿಷತ್ ನಿಧಿಯಿಂದ ₹ 10 ಲಕ್ಷ ನೀಡಲಾಗಿದೆ. ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದು, ಕಾಮಗಾರಿಗೆ ಆರೋಗ್ಯ ಸಚಿವಾಲಯದಿಂದ ಹಸಿರು ನಿಶಾನೆ ಸಿಕ್ಕಿದೆ ಎಂದರು.

ತಹಶೀಲ್ದಾರ್ ಬಸವರಾಜ್, ಇ.ಒ.ಗಿರೀಶ್, ತಾ.ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್, ಡಾ.ಸರ್ವೇಶ್ ರಾಜೇ ಅರಸು, ಮುಖಂಡ ಅಮಿತ್ ದೇವರಹಟ್ಟಿ, ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ, ಹರೀಶ್, ಸಾಯಿ ನಾಥ್, ಮಾಜಿ ಸದಸ್ಯ ಶಿವಕುಮಾರ್, ಮುಖಂಡರಾದ ಕಮಲಮ್ಮಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.