ಮೈಸೂರು: ‘ಸದಾ ಕುರ್ಚಿಗಂಟಿಕೊಂಡು ಅಧಿಕಾರ ನಡೆಸಲು ಇದು ತಮಿಳುನಾಡಲ್ಲ. ಸಿದ್ದರಾಮಯ್ಯ ಎಂಜಿಆರ್ ಅಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಡಿ.ಕೆ.ಶಿವಕುಮಾರ್ಗೆ ಅವಕಾಶ ಮಾಡಿಕೊಡುವುದು ಒಳಿತು’ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರತಿಪಾದಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಅಂತಹ ನಾಯಕರೇ ಹೊರತು ಸಿದ್ದರಾಮಯ್ಯ ಅಲ್ಲ. ಕಾಂಗ್ರೆಸ್ ಸಚಿವರೇ ಅವರ ಮಾತನ್ನು ಕೇಳುತ್ತಿಲ್ಲ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಸಿದ್ದರಾಮಯ್ಯ, ಫ್ರಾನ್ಸ್ನ ಸರ್ವಾಧಿಕಾರಿ 16ನೇ ಲೂಯಿ ಇದ್ದಂತೆ. ಕರ್ನಾಟಕವನ್ನು ಮುಳುಗಿಸಿಯೇ ಹೋಗುತ್ತಾರೆ’ ಎಂದು ಟೀಕಿಸಿದ ಅವರು, ‘ವೈಯಕ್ತಿಕ ತೆವಲುಗಳಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಬಾರದು. ಗ್ಯಾರಂಟಿ ಯೋಜನೆಗಳಿಂದಾದ ಪ್ರಯೋಜನಗಳ ಕುರಿತು ಆರ್ಥಿಕ ಸಮೀಕ್ಷೆ ನಡೆಸಬೇಕು. ಪ್ರತಿ ಯೋಜನೆಗೂ ಮಾನದಂಡ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.
‘ಉಚಿತ ಯೋಜನೆಗಳ ಹೆಸರಿನಲ್ಲಿ ಕರ್ನಾಟಕ ಸಾಲದ ಶೂಲಕ್ಕೆ ಸಿಲುಕಿದೆ. 2022–23ರ ಬಜೆಟ್ನಲ್ಲಿ ಸರ್ಕಾರ ₹44,549 ಕೋಟಿ ಸಾಲ ಮಾಡಿತ್ತು. 2023–24ರ ಬಜೆಟ್ನಲ್ಲಿ ಇದು ₹85,818 ಕೋಟಿ ಹಾಗೂ 2024–25ರ ಬಜೆಟ್ನಲ್ಲಿ ₹1.05 ಲಕ್ಷ ಕೋಟಿ ಹಾಗೂ 2025–26ನೇ ಸಾಲಿಗೆ ₹1.16 ಲಕ್ಷ ಕೋಟಿಗೆ ಏರಿಕೆಯಾಗಿದೆ. ಒಟ್ಟು ₹7.64 ಲಕ್ಷ ಕೋಟಿ ಸಾಲದ ಹೊರೆಬಿದ್ದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸದನದಲ್ಲಿ ಒಬ್ಬ ಸಚಿವರು ಹನಿಟ್ರ್ಯಾಪ್ ಬಗ್ಗೆ ಆರೋಪಿಸಿದಾಗ ದಾಖಲೆ ಕೇಳುವ ಯೋಚನೆ ಯಾರಿಗೂ ಬರಲಿಲ್ಲ. ಆಡಳಿತ ಹಾಗೂ ವಿರೋಧ ಪಕ್ಷಗಳೆರಡೂ ದಿವಾಳಿ ಎದ್ದುಹೋಗಿವೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.