ಮೈಸೂರು: ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಖಾಸಗಿ ನಿರ್ವಹಣೆಗೆ ನೀಡುವುದನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳ ನಡೆಗೆ ಸಂಸದೆ ಸುಮಲತಾ ಸೋಮವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ನಿಮ್ಮದೇ ಆಡಳಿತದಲ್ಲಿ ಖಾಸಗಿಯವರ ನಿರ್ವಹಣೆಗೆ ನೀಡಲು ಮುಂದಾದಾಗ ಯಾರ ವಿರೋಧವೂ ಇರಲಿಲ್ಲ. ಈಗಿನ ಸರ್ಕಾರ ಪ್ರಕ್ರಿಯೆ ನಡೆಸುತ್ತಿದ್ದಂತೆ ವಿರೋಧ ವ್ಯಕ್ತಪಡಿಸುವುದು ಏತಕ್ಕಾಗಿ? ನಿಮ್ಮ ಉದ್ದೇಶವಾದರೂ ಏನು? ರೈತರಿಗೆ ಅನುಕೂಲವಾಗುವುದು ಬೇಡವೇ’ ಎಂದು ಪ್ರಶ್ನಿಸಿದರು.
‘₹ 420 ಕೋಟಿ ಬಂಡವಾಳ ಹೂಡಿದರೂ ಪ್ರತಿಫಲ ಸಿಕ್ಕಿಲ್ಲ. ಸರ್ಕಾರದಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದೇ ಮುಖ್ಯಮಂತ್ರಿ ತಿಳಿಸಿದ್ದಾರೆ. ಭ್ರಷ್ಟಾಚಾರ, ಹಣ ದುರ್ಬಳಕೆಯಿಂದ ನಲುಗಿರುವ ಮೈಶುಗರ್ಗೆ ಪುನಶ್ಚೇತನ ನೀಡುವುದು ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ನನ್ನ ಯತ್ನವೂ ನಡೆದಿದೆ’ ಎಂದರು.
‘ಸಹಕಾರಿ ಸಕ್ಕರೆ ಕಾರ್ಖಾನೆಗಳ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸುವೆ. ರೈತರಿಗೆ ಒಳಿತನ್ನು ಮಾಡುವುದಕ್ಕಾಗಿಯೇ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರ ನಿರ್ವಹಣೆಗೆ ವಹಿಸಿಕೊಟ್ಟಿದ್ದು, ಅಕ್ಟೋಬರ್ ವೇಳೆಗೆ ಪುನರಾರಂಭಗೊಳ್ಳುವ ವಿಶ್ವಾಸವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರಕ್ಕೆ ಸಾಧ್ಯವಿಲ್ಲ: ‘ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದಿಂದ ನಡೆಸಲು ಸಾಧ್ಯವಾಗುತ್ತಿಲ್ಲ ಎಂದೇ ಖಾಸಗಿಯವರಿಗೆ ವಹಿಸಿದ್ದೇವೆ. ನಿರಾಣಿ ಗ್ರೂಪ್ ಕಂಪನಿಗೆ ಒಳ್ಳೆಯ ಹೆಸರಿದೆ. ಖಾಸಗೀಕರಣದಿಂದ ಕಾರ್ಖಾನೆ ಅಭಿವೃದ್ಧಿಗೊಳ್ಳಲಿದೆ. ₹ 430 ಕೋಟಿ ಬಂಡವಾಳ ತೊಡಗಿಸಿ, ಸ್ಥಳೀಯ ಎಲ್ಲ ಸಮಸ್ಯೆ ಬಗೆಹರಿಸಲಿದ್ದಾರೆ. ಒಂದೆರಡು ದಿನಗಳಲ್ಲಿ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ನೀಡಿ ಕಾರ್ಖಾನೆಯ ಕಾರ್ಮಿಕರು, ರೈತರ ಸಮಸ್ಯೆ ಆಲಿಸಲಿದ್ದಾರೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.